ಡೈಲಿ ವಾರ್ತೆ: 28/JUNE/2025

ಕವರತ್ತಿ ದ್ವೀಪದ ನೂತನ ಖಾಝಿಯಾಗಿ ಎಕಾರ್ ಪಲ್ಲಿ ಸೈಯದ್ ಸೈದಲಿ ಕೋಯಾ ತಂಗಳ್ ನೇಮಕ

ಕವರತ್ತಿ ದ್ವೀಪದ ನೂತನ ಖಾಝಿಯಾಗಿ ಎಕಾರ್”ಪಲ್ಲಿ ಹಜರತ್ ಸೈಯದ್ ಸೈದಲಿ ಕೋಯಾ ತಂಗಳ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಖಾಝಿ, ಗೌರವಾನ್ವಿತ ಹಮ್ಜತ್ ಮುಸ್ಲಿಯಾರ್ ಅವರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ ನಂತರ ನೂತನ ಖಾಝಿ ನೇಮಕ ಮಾಡಲಾಗಿದೆ. ಕವರತ್ತಿ ದ್ವೀಪದಲ್ಲಿ ಅಂತಿಮ ವಿಶ್ರಾಮ ಪಡೆಯುತ್ತಿರುವ ಹಜರತ್ ಸಯ್ಯದ್ ಕಾಸಿಂ ವಲಿಯುಲ್ಲಾಹರವರ ಕುಟುಂಬ ಪರಂಪರೆಯವರಾದ ಶ್ರೀಯುತ ಎಕಾರ್’ಪಲ್ಲಿ ಸೈಯದ್ ಸೈದಲಿ ಕೋಯಾ ತಂಗಳ್ ಕವರತ್ತಿ ದ್ವೀಪದಲ್ಲಿ ಹುಟ್ಟಿ ಬಾಲ್ಯವನ್ನು ಬೈಂದೂರಿನಲ್ಲಿ ಕೆಲವು ಸಮಯ ಕಳೆದಿರುತ್ತಾರೆ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅರಬಿಕ್ ಮದರಸದಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ತಿ ಗೊಳಿಸಿ ಮದನಿ ಬಿರುದನ್ನು ಪಡೆದಿರುತ್ತಾರೆ.

ಇತಿಹಾಸ ಪ್ರಸಿದ್ಧ ಬೈಂದೂರು ಜಾಮಿಯಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಇಮಾಮ್ ಹಾಗೂ ಖಾಝಿಯಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿರುತ್ತಾರೆ. ಈಗಲೂ ಸಹ ಬೈಂದೂರಿನ ಜನತೆಯೊಂದಿಗೆ ನಿಕಟ ಸಂಪರ್ಕದಲ್ಲಿರುವ ಶ್ರೀಯುತರು ಬೈಂದೂರಿನ ಜನತೆಗಾಗಿ ಸುಮಾರು 40 ವರ್ಷಗಳ ಹಿಂದೆಯೇ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ, ಬಡ ನಿರ್ಗತಿಕ ಹಾಗೂ ಅನಾರೋಗ್ಯ ಪೀಡಿತ ಜನತೆಯ ಸಹಾಯಕ್ಕಾಗಿ ಅಂಜುಮನ್ ಶಬಾಬುಲ್ ಇಸ್ಲಾಂ ವೆಲ್ಫೇರ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿರುತ್ತಾರೆ.
ಈ ಸಂಸ್ಥೆಯ ಅಡಿಯಲ್ಲಿ ಗೌರವಾನ್ವಿತರು ಬೈಂದೂರಿನಲ್ಲಿ ಸೈಯದಾ ಹಜಾನಿ ಆಯಿಷಾ ಅರಬಿಕ್ ಶಾಲೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಸದಾ ಹಸನ್ಮುಖಿಯಾಗಿ ಜನರೊಂದಿಗೆ ಬೆರೆಯುವ ಹಾಗೂ ಜನರ ಕಷ್ಟಕಾರ್ಪಣ್ಯಗಳಿಗೆ ಸದಾಕಾಲ ಸ್ಪಂದಿಸುವ ಶ್ರೀಯುತರು ಮಂಗಳೂರು ಹಾಗೂ ಬೈಂದೂರು ಇತರ ಭಾಗಗಳಲ್ಲಿ ಕೋಯಾ ಹಜರತ್ ಎಂದೆ ಚಿರಪರಿಚಿತರು.