ಡೈಲಿ ವಾರ್ತೆ: 01/ಜುಲೈ/2025

30 ವರ್ಷದ ಹಿಂದೆ ವಿದ್ಯಾರ್ಥಿಗೆ 200 ರೂ. ವಂಚಿಸಿದ ಪ್ರಕರಣ: ಬೈಂದೂರು ಮೂಲದ ಆರೋಪಿ ಬಂಧನ!

ಕುಂದಾಪುರ : ವಿದ್ಯಾರ್ಥಿಯೊಬ್ಬನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಕೇವಲ 200 ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನು ಬರೋಬ್ಬರಿ 30 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ಮೂಲದ ಪ್ರಸ್ತುತ ಬೆಂಗಳೂರಿನ ಬಳೆಪೇಟೆ ಯಲ್ಲಿ ನೆಲಸಿರುವ ಬಿ.ಕೆ.ರಾಮಚಂದ್ರರಾವ್ ಬಂಧಿತ ಆರೋಪಿ.

ಈತನಿಗೆ ಸರಿಸುಮಾರು 30ವರ್ಷಗಳ ಹಿಂದೆ ನೀಲಕಂಠ ಹೆಗಡೆ ಎಂಬವನ ಮೂಲಕ ಶಿರಸಿಯಲ್ಲಿ ಪದವಿ ಓದುತ್ತಿದ್ದ ಬಿಳಿಗಿರಿ ಕೊಪ್ಪ ವೆಂಕಟೇಶ ವೈದ್ಯ ಎಂಬಾತನ ಪರಿಚಯವಾಗಿತ್ತು. ವೆಂಕಟೇಶ್ ಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಆತನಿಂದ 200 ರೂ. ಗಳನ್ನು ಪಡೆದ ರಾಮಚಂದ್ರರಾವ್ ವಂಚಿಸಿ ಪರಾರಿಯಾಗಿದ್ದ.

ಈ ಕುರಿತು ಶಿರಸಿ ಠಾಣೆಯಲ್ಲಿ ವೆಂಕಟೇಶ್ ವೈದ್ಯ ದೂರು ದಾಖಲಿಸಿದ್ದರು. ಆದರೆ ಆರೋಪಿ ಪತ್ತೆಯಾಗಿರಲಿಲ್ಲ. ಹಿಂದಿನ ಪ್ರಕರಣಗಳ ವಿಚಾರಣೆಗಳನ್ನು ಕೈಗೆತ್ತಿಗೊಂಡ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಮಾರ್ಗದರ್ಶನ ಮತ್ತು ಪಿಎಸ್‌ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ಅವರ ತಂಡ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಿ ಶಿರಸಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಂತೆ ಆತನನ್ನು ಕಾರವಾರ ಜೈಲಿಗೆ ಹಾಕಲಾಗಿದೆ. ಕೋಟ್ಯಾಂತರ ರೂಪಾಯಿಗಳನ್ನು ತಿಂದುತೇಗಿ ಬಿಂದಾಸ್ ಆಗಿರುವ ಈ ಕಾಲದಲ್ಲಿ ಕೇವಲ 200ರೂಪಾಯಿ ವಂಚನೆ ಮಾಡಿ ಅದೂ 30ವರ್ಷಗಳ ನಂತರ ಆರೋಪಿ ಜೈಲು ಪಾಲಾಗಿರುವುದು ಅಚ್ಚರಿ ಮೂಡಿಸಿದೆ.