ಡೈಲಿ ವಾರ್ತೆ: 12/ಜುಲೈ/2025

ಕಾಂಗ್ರೆಸ್ ಏನ್ ದಬಾಕಿರೋದು? ಹೆಂಗಸರು ಬೀದಿ ಸುತ್ತೋ ಹಾಗೆ ಮಾಡಿದ್ದೇ ಸಿಎಂ: ಗಾಂಧೀಜಿ, ಇಂದಿರಾ ವಿರುದ್ಧ ನಾಲಿಗೆ ಹರಿಬಿಟ್ಟ ಸಬ್ ರಿಜಿಸ್ಟರ್ ರಾಧಮ್ಮ, ರೈತ ಸಂಘದಿಂದ ಮಹಿಳಾ ಅಧಿಕಾರಿ ವಿರುದ್ಧ ಪ್ರತಿಭಟನೆ

ತುಮಕೂರು: ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆಯ ಬಗ್ಗೆ ಪಾವಗಡದ ಸಬ್ ರಿಜಿಸ್ಟರ್ ಟೀಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಸಬ್ ರಿಜಿಸ್ಟರ್ ರಾಧಮ್ಮ, “ಕಾಂಗ್ರೆಸ್ ಏನ್ ದಬಾಕಿರೋದು? ಗಾಂಧೀಜಿ ಹೆಂಡತಿ ಮುಸ್ಲಿಂ, ಇಂದಿರಾಗಾಂಧಿ ಗಂಡ ಮುಸ್ಲಿಂ, ಅಧಿಕಾರನಾ ಕಾಂಗ್ರೆಸ್‍ಗೆ ಕೊಟ್ಟಿದ್ರೆ ಇಷ್ಟೊತ್ತಿಗೆ ಇಂಡಿಯಾ ಧೂಳಿಪಟ, ನಮಗೆ ಕುಡಿಯೋಕೆ ನೀರು ಸಿಗ್ತಿರಲಿಲ್ಲ. ಸಿದ್ದರಾಮಯ್ಯ ಎಲ್ಲವನ್ನೂ ಫ್ರೀಯಾಗಿ ಹೆಣ್ಣು ಮಕ್ಕಳಿಗೆ ಕೊಟ್ಟ, ಎಲ್ಲಾ ದರ ಜಾಸ್ತಿ ಮಾಡಿ ಬರೆ ಎಳೆದ. ತರಕಾರಿ, ಹಣ್ಣು, ಹಾಲು, ಮಕ್ಕಳು ತಿನ್ನುವ ಬಿಸ್ಕೆಟ್ ಎಲ್ಲಾ. ಬೆಳೆ ಕಾಳು ಎಲ್ಲ ಒನ್ ಟು ಡಬಲ್ ಆಗಿದೆ. ಹೆಂಗಸರು ಮನೆಲಿ ಇರದೇ ಬೀದಿ ಸುತ್ತುವ ಹಾಗೇ ಮಾಡಿದ್ದೆ ಸಿದ್ದರಾಮಯ್ಯ.” ಎಂದು ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ರೈತ ಸಂಘದ ಕಾರ್ಯಕರ್ತರು ಅಧಿಕಾರಿಯ ವಿರುದ್ಧ ಪ್ರತಿಭಟಿಸಿದ್ದಾರೆ. ರಾಧಮ್ಮ ಲಂಚ ಇಲ್ಲದೇ ಕೆಲಸ ಮಾಡಲ್ಲ. ಈಗ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಗ್ಯಾರಂಟಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರೈತರ ವಿರೋಧಿಯಾಗಿರುವ ಅಧಿಕಾರಿ ರಾಧಮ್ಮರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರೈತ ಸಂಘದ ಪ್ರತಿಭಟನೆ ಬಳಿಕ ಎಚ್ಚೆತ್ತ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ರಾಧಮ್ಮರನ್ನು ತುಮಕೂರು ಜಿಲ್ಲಾ ನೋಂದಣಿ ಕಚೇರಿಗೆ ಎತ್ತಂಗಡಿ ಮಾಡಿದ್ದಾರೆ.