


ಡೈಲಿ ವಾರ್ತೆ: 12/ಜುಲೈ/2025


ಧರ್ಮಸ್ಥಳದಲ್ಲಿ ನಡೆದ ಅಪರಾಧ ಕೃತ್ಯಗಳು ಅವ್ಯಾಹತ, ಆಡಳಿತದ ಸುತ್ತ ಅನುಮಾನದ ಹುತ್ತ; ಸಮಗ್ರ ತನಿಖೆಗೆ ವಿಮ್ ಆಗ್ರಹ

ದಕ್ಷಿಣ ಕನ್ನಡ: ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಾದ ಮೇಲೆ ಒಂದರಂತೆ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು
ಇದೀಗ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆದ ಲೈಂಗಿಕ ದೌರ್ಜನ್ಯ ಮತ್ತು ಸರಣಿ ಹತ್ಯೆಗಳು ಪೈಶಾಚಿಕವಾಗಿದ್ದು ಇದರ ಭಯಾನಕತೆಯು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಆತಂಕ ವ್ಯಕ್ತಪಡಿಸಿದರು.
ಅಪರಾಧಗಳ ವಿರುದ್ಧ ಅಚಂಚಲಿತವಾಗಿ ಪ್ರಯೋಗವಾಗಬೇಕಾದ ಕಾನೂನು ಆಯ್ದ ವಿಷಯಗಳಲ್ಲಿ ಸಕ್ರಿಯ, ಪ್ರಭಾವ ಎದುರದಾಗ ನಿಷ್ಕ್ರಿಯಗೊಳ್ಳುತ್ತಿರುವ ಹಾಗೆ ಭಾಸವಾಗುತ್ತಿದೆ. ಕಾನೂನು ಅನುಷ್ಠಾನದಲ್ಲಿ ಇಂತಹ ತಾರತಮ್ಯವು ಸಂವಿಧಾನಕ್ಕೆ ಮಾಡುವ ಅಪಮಾವನವಾಗಿದೆ ಎಂದು ಅವರು ಹೇಳಿದರು.
ಜೀವ ಭಯದ ಕಾರಣದಿಂದ, ಉದ್ದೇಶಪೂರ್ವಕವಲ್ಲದೆ ಈ ಕೊಲೆಯ ಪ್ರಕರಣಗಳ ಭಾಗವಾಗಬೇಕಾಗಿ ಬಂದ ವ್ಯಕ್ತಿಯೋರ್ವ ಸ್ವತಃ ಮುಂದೆ ಬಂದು ದೂರು ದಾಖಲಿಸಿದ್ದಾನೆ. ಈ ವ್ಯಕ್ತಿಯ ಆಘಾತಕಾರಿ ಹೇಳಿಕೆಗಳು ಧರ್ಮಸ್ಥಳದ ಕರಾಳ ವಾಸ್ತವಗಳನ್ನು ಅನಾವರಣಗೊಳಿಸುವ ಜೊತೆಗೆ ಈ ಸಮಾಜದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಚಾರಣೆಯು ಕುಂಟುತ್ತಾ ಸಾಗುತ್ತಿದ್ದು ವ್ಯವಸ್ಥೆಯ ಈ ವಿಳಂಬ ನೀತಿಯು ಸಾಕ್ಷ್ಯನಾಶ ಪಡಿಸಲು ವಿಫುಲ ಅವಕಾಶವನ್ನು ನೀಡುತ್ತದೆ.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಸೇರಿದಂತೆ ನೂರಾರು ಅಮಾಯಕರ ಹತ್ಯೆಗಳಿಗೆ ಧರ್ಮಸ್ಥಳವು ಸಾಕ್ಷಿಯಾಗಿದ್ದು, ಅದೆಷ್ಟೋ ಯುವತಿಯರು, ಮಹಿಳೆಯರು
ಇಲ್ಲಿನ ಗೋಮುಖ ವ್ಯಾಘ್ರಗಳಿಗೆ ಬಲಿಪಶುಗಳಾಗಿರುವುದು ಸುಸಭ್ಯ, ಸುಸಂಸ್ಕೃತ ನೆಲೆಯ ದುರಂತವಾಗಿದೆ.
ಅತ್ಯಾಚಾರಗೈದು ಅಥವಾ ಇನ್ನಿತರ ಕಾರಣಗಳಿಂದಾಗಿ ಕೊಲೆಗೈಯ್ಯಲ್ಪಟ್ಟ ಹಲವು ವ್ಯಕ್ತಿಗಳ, ಮಹಿಳೆಯರು ಯುವತಿಯರು ಸೇರಿದಂತೆ ನೂರಾರು ಮೃತ ದೇಹಗಳನ್ನು ಸಾಕ್ಷಿ ಸಹಿತ ಹೂತುಹಾಕಲಾಗಿರುವ ಗಂಭೀರ ವಿಚಾರಗಳು ಬಹಿರಂಗವಾಗಿದ್ದರೂ ,ಕೃತ್ಯಗಳ ಮಹತ್ವದ ಸಾಕ್ಷಿಯೆನಿಸುವ ವ್ಯಕ್ತಿಯೇ ಖುದ್ದಾಗಿ ದ.ಕ.ಎಸ್ಪಿ ಗೆ ದೂರು ನೀಡಿದ್ದರೂ ರಾಜ್ಯದ ಗೃಹ ಸಚಿವರು ಇದುವರೆಗೂ ತುಟಿಪಿಟಿಕ್ ಎನ್ನದೆ ಮೌನವಾಗಿರುವುದು ಧರ್ಮಸ್ಥಳದ ಪ್ರಭಾವಿಗಳನ್ನು ರಕ್ಷಿಸುವ ಸಂಕೇತವೇ ?
ಒಂದು ಸಣ್ಣ ಫೇಸ್ಬುಕ್ ಪೋಸ್ಟ್ ವಿಚಾರಕ್ಕೂ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧಿಸುವ ಪೋಲೀಸ್ ಇಲಾಖೆಯ ಸಕ್ರಿಯತೆ ಧರ್ಮಸ್ಥಳದ ಸರಣಿ ಕೊಲೆ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿರುವುದು ಏನನ್ನು ಸೂಚಿಸುತ್ತದೆ ? ಧರ್ಮಸ್ಥಳದ ಪ್ರಕರಣಗಳನ್ನು ಭೇಧಿಸದಂತೆ ನಿರ್ಬಂಧ ಹೇರಲಾಗಿದೆಯೇ?
ಪ್ರಭಾವಿಗಳ ಸುಪರ್ದಿಯಲ್ಲಿ ನಡೆಯುವ ಜನಸಾಮಾನ್ಯರ ಸಾವು ನೋವುಗಳಿಗೆ ನ್ಯಾಯವನ್ನು ನಿರಾಕರಿಸಲಾಗುತ್ತಿದಯೇ? ಈ ಎಲ್ಲ ಅನುಮಾನಗಳಿಗೆ ಅವಕಾಶ ನೀಡದಂತೆ
ಸರ್ಕಾರವು ಕೂಡಲೇ ಕಾರ್ಯಪ್ರವ್ರತ್ತವಾಗಬೇಕು. ದಕ್ಷ ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಿ ಶೀಘ್ರವೇ ಪ್ರಕರಣಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು. ದೂರುದಾರನಿಗೆ ಹಾಗೂ ಆತನ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಕಲ್ಪಿಸಿ ಸರಣಿ ಹತ್ಯೆಗಳ ಸೂತ್ರಧಾರಿಗಳನ್ನು ಕಾನೂನಿನ ಕುಣಿಕಗೆ ಒಪ್ಪಿಸಲೇಬೇಕು. ಕೊಲೆಯಾದವರ ಕುಟುಂಬಗಳಿಗೆ ನ್ಯಾಯ ಒದಗಿಸುವ ಮೂಲಕ ಸರ್ಕಾರವು ತನ್ನ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಆಗ್ರಹಿಸಿದರು.