


ಡೈಲಿ ವಾರ್ತೆ: 15/ಜುಲೈ/2025


ಗಂಗೊಳ್ಳಿ| ಮೀನುಗಾರಿಕೆ ದೋಣಿ ಮಗುಚಿ ಮೂವರು ಸಮುದ್ರಪಾಲು, ಓರ್ವ ಮೀನುಗಾರನ ರಕ್ಷಣೆ

ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಬಾರಿ ಗಾಳಿಮಳೆಗೆ ಮುಳುಗಿ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ಮಂಗಳವಾರ ಸಂಭವಿಸಿದೆ.
ನಾಪತ್ತೆಯಾದವರನ್ನು ರೋಹಿತ್ ಖಾರ್ವಿ(38), ಸುರೇಶ ಖಾರ್ವಿ(45) ಜಗನ್ನಾಥ್ ಖಾರ್ವಿ(43) ಎಂದು ಗುರುತಿಸಲಾಗಿದೆ. ಓರ್ವ ಮೀನುಗಾರ ಪಾರಾಗಿದ್ದಾನೆ.
ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಸಮುದ್ರದಲ್ಲಿ ಕಡಲ ಅಬ್ಬರ ಜೋರಾಗಿದೆ. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಟ್ರಾಲ್ ದೋಣಿ ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದ ಪರಿಣಾಮ ನಾಲ್ಕು ಮಂದಿ ಸಮುದ್ರ ಪಾಲಾಗಿದ್ದು ಈ ವೇಳೆ ಓರ್ವ ಮೀನುಗಾರ ಸಂತೋಷ ಖಾರ್ವಿ (35) ಎಂಬುವವರು ಈಜಿ ದಡ ಸೇರಿದ್ದಾರೆ.
ನಾಪತ್ತೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.