ಡೈಲಿ ವಾರ್ತೆ: 26/ಜುಲೈ/2025

ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

ಬೆಂಗಳೂರು: ಸ್ವಂತ ಚಿಕ್ಕಪ್ಪನೇ ಅಣ್ಣನ ಮಕ್ಕಳನ್ನು ಕ್ರೂರವಾಗಿ ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ನಡೆದಿದೆ.

ಮಹಮ್ಮದ್ ಇಶಾಕ್ (9) ಮಹಮ್ಮದ್ ಜುನೇದ್ (7) ಹಲ್ಲೆಯಿಂದ ಮೃಪಟ್ಟ ಮಕ್ಕಳು.

ಖಾಸೀಂ (35) ಮಕ್ಕಳನ್ನು ಕೊಲೆ ಆರೋಪಿ. ಈತ ಸ್ವಂತ ಅಣ್ಣನ ಮೂವರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರು ಸಾವನ್ನಪ್ಪಿದ್ರೆ, 5‌ ವರ್ಷದ ಮಗು (ಮಹಮದ್ ರೋಹನ್) ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.

ಘಟನೆ ವಿವರ:
ಮನೆಯಲ್ಲಿ ಮಕ್ಕಳನ್ನ ಅಜ್ಜಿಯೊಂದಿಗೆ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಅಜ್ಜಿ ತರಕಾರಿ ತರಲು ಮಾರ್ಕೆಟ್‌ಗೆ ಹೋಗಿದ್ದ ವೇಳೆ ಮಾನಸಿಕ ಅಸ್ವಸ್ಥನಂತೆ ವರ್ತಿಸಿರುವ ಖಾಸೀಂ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮೂರು ಮಕ್ಕಳ ಗುಪ್ತಾಂಗಗಳಿಗೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮೃತ ಮಕ್ಕಳ ತಂದೆ ಚಾಂದ್‌ ಪಾಷ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಲ್ಲವೂ ಚೆನ್ನಾಗಿತ್ತು, ಆದ್ರೆ ಇದ್ದಕ್ಕಿಂತೆ ಏನಾಯ್ತೋ ಗೊತ್ತಿಲ್ಲ, ಇಷ್ಟೊಂದು ಕ್ರೂರವಾಗಿ ಹಲ್ಲೆ ಮಾಡಿ, ನಮ್ಮ ಮಕ್ಕಳನ್ನ ಕೊಂದಿದ್ದಾನೆಂದು ಚಾಂದ್ ಪಾಷ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಚಾಂದ್‌ ಪಾಷ 5 ವರ್ಷಗಳ ಹಿಂದೆ ಯಾದಗಿರಿಯಿಂದ ಹೆಬ್ಬಗೋಡಿಗೆ ಬಂದು ನೆಲೆಸಿದ್ದ. ಮಡದಿ ಮೂವರು ಮಕ್ಕಳು, ತಾಯಿ ತಮ್ಮನ ಜೊತೆ ವಾಸ ಮಾಡಿಕೊಂಡಿದ್ದ. ಚಾಂದ್‌ ಪಾಷ ಗಾರೆಕೆಲಸ, ಪತ್ನಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ತಮ್ಮ ಖಾಸೀಂ ಮನೆಯಲ್ಲೇ ಇರುತ್ತಿದ್ದ. ಮಾನಸಿಕ ಅಸ್ವಸ್ಥನಂತೆ ಇದ್ದು, ತಿಂಗಳ ಹಿಂದೆ ಕಾಣೆಯಾಗಿದ್ದ. ಅಣ್ಣ ಚಾಂದ್ ಪಾಷ ಹುಡುಕಿ ಮನೆಗೆ ಕರೆತಂದಿದ್ದ. ಆದ್ರೆ ಇಂದು ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ವಿಚಾರಣೆ ನಡೆಸುತ್ತಿದ್ದು, ಭಿನ್ನ ಭಿನ್ನ ಹೇಳಿಕೆ ಕೊಡುತ್ತಿದ್ದಾನೆ ಅಂತ ವಿವರಿಸಿದ್ದಾರೆ.