


ಡೈಲಿ ವಾರ್ತೆ: 29/ಜುಲೈ/2025


ಬೀದಿನಾಯಿ ದಾಳಿಗೆ ವೃದ್ಧ ಬಲಿ!

ಬೆಂಗಳೂರು: ಬೀದಿನಾಯಿ ದಾಳಿಗೆ ವೃದ್ಧ ಬಲಿಯಾದ ಘಟನೆ ತಡರಾತ್ರಿ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಟೆಲಿಕಾಮ್ ಲೇಔಟ್ನಲ್ಲಿ ನಡೆದಿದೆ.
ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸೀತಪ್ಪ (68) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಡರಾತ್ರಿ ಮನೆಯಿಂದ ಹೊರಬಂದಿದ್ದ ಸೀತಪ್ಪ ಅವರ ಮೇಲೆ 7-8 ಬೀದಿ ನಾಯಿಗಳು ದಾಳಿ ಮಾಡಿವೆ. ತಪ್ಪಿಸಿಕೊಂಡು ಓಡಲಾರದೆ ನೆಲಕ್ಕೆ ಬಿದ್ದ ಸೀತಪ್ಪ ಅವರ ಕೈ, ಕಾಲು, ಮುಖಕ್ಕೆ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು.
ಸ್ಥಳದ ಸಮೀಪದಲ್ಲಿದ್ದ ಬೀಟ್ ಪೊಲೀಸರು ಹರಸಾಹಸಪಟ್ಟು ನಾಯಿಗಳಿಂದ ಸೀತಪ್ಪರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಡಿಗೆಹಳ್ಳಿ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು ಪ್ರಕರಣ) ವರದಿಯಾಗಿದ್ದು, ಮೃತನ ಪುತ್ರ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.