ಡೈಲಿ ವಾರ್ತೆ: 03/ಆಗಸ್ಟ್/ 2025

ಮುಸ್ಲಿಂ ಹೆಡ್ ಮಾಸ್ಟರ್ ವರ್ಗಾವಣೆ ಮಾಡಲು ಮಕ್ಕಳಿಗೆ ವಿಷವಿಟ್ಟ ಪಾಪಿಗಳು

ಬೆಳಗಾವಿ: ಶಾಲಾ ಮುಖ್ಯ ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸಬೇಕು ಎಂದು ಶಾಲೆಯ ಆವರಣದಲ್ಲಿದ್ದ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್‌ಗೆ ಅಪ್ರಾಪ್ತ ಮಗುವಿನ ಕಡೆಯಿಂದಲೇ ವಿಷ ಪ್ರಾಷಣ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹೂಲಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯಕ್ ಹಾಗೂ ಮತ್ತೋರ್ವ ಮೇಷ್ಟ್ರು ಕೆಲಸ ಮಾಡುತ್ತಿದ್ದಾರೆ. ಸುಲೇಮಾನ್ ಗೋರಿನಾಯಕ್ ಕಳೆದ 13 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬ ಕಾರಣ ಹಾಗೂ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸಬೇಕು ಎಂದು ಸಾಗರ್ ಪಾಟೀಲ್ ಪ್ಲಾನ್ ಮಾಡಿ ಕೃಷ್ಣಾ ಪಾಟೀಲ್ ಎಂಬಾತನನ್ನು ಬ್ಲಾಕ್ ಮೇಲ್ ಮಾಡಿ ಮನವಳ್ಳಿಯಿಂದ ಕೀಟನಾಶಕ ತರಿಸಿ ಮಾಜಾ ಬಾಟಲ್‌ನಲ್ಲಿ ವಿಷ ಬೆರೆಸಿ ಅಪ್ರಾಪ್ತ ಮಗುವನ್ನು ಬಳಸಿಕೊಂಡು ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದರು.

ಕೃಷ್ಣಾ ಮಾದರ್ ಅದೇ ಗ್ರಾಮದ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ತಾನು ಹೇಳಿದ ಕೆಲಸವನ್ನು ಮಾಡದಿದ್ದರೆ ನೀನು ಅನ್ಯಜಾತಿಯ ಹುಡುಗಿಯ ಪ್ರೀತಿಸುತ್ತಿರುವ ವಿಚಾರವನ್ನು ಊರಿಗೆಲ್ಲ ಪುಕಾರು ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದ. ಹೀಗಾಗಿ ಕೃಷ್ಣಾ ಮಾದರ್ ತನ್ನ ಸ್ನೇಹಿತ ನಾಗನಗೌಡ ಪಾಟೀಲ್ ಜೊತೆ ಸೇರಿ ಕೃತ್ಯ ಮಾಡಲು ಸಜ್ಜಾಗುತ್ತಾರೆ. ಮುನವಳ್ಳಿಯಿಂದ ವಿಷ ತೆಗೆದುಕೊಂಡು ಬಂದು ಅದೇ ಶಾಲೆಯ ಮಗುವಿಗೆ 500 ರೂಪಾಯಿ ದುಡ್ಡು ನೀಡಿ ಅದೂ ಅಲ್ಲದೆ ತಿನ್ನಲು ಕುರ್ಕುರೆ ಹಾಗೂ ಚಾಕಲೇಟ್ ನೀಡಿ ನೀರಿನ ಟ್ಯಾಂಕ್‌ಗೆ ಹಾಕುವಂತೆ ಹೇಳಿದ್ದರು. ಕೃಷ್ಣಾ ಮಾದರ್ ಹಾಗೂ ನಾಗನಗೌಡ ಹೇಳಿದಂತೆ ಆ ಅಪ್ರಾಪ್ತ ಮಗು ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿತ್ತು.

ವಿಷ ಬೆರೆಸಿದ ನಂತರ ಮಕ್ಕಳು ಅದೇ ನೀರು ಕುಡಿದು ಜುಲೈ 14 ರಂದು ಅಸ್ವಸ್ಥರಾಗಿದ್ದರು. ಅಸ್ವಸ್ಥರಾದ 11 ಮಕ್ಕಳನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಕ್ಕಳು ಚೇತರಿಸಿಕೊಂಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಗರ್ ಪಾಟೀಲ್, ಕೃಷ್ಣಾ ಮಾದರ್, ಹಾಗೂ ನಾಗನಗೌಡ ಪಾಟೀಲ್‌ರನ್ನು ಬಂಧಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.