


ಡೈಲಿ ವಾರ್ತೆ: 08/ಆಗಸ್ಟ್/ 2025


ಕಾಂತಾರ ಚಿತ್ರದಲ್ಲಿದ್ದ ಕೋಣ ಬೋಳಂಬಳ್ಳಿ ಅಪ್ಪು ಇನ್ನಿಲ್ಲ

ಕುಂದಾಪುರ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ
ಕಾಂತಾರ ಚಿತ್ರ ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದ ಆರಂಭದಲ್ಲಿ ಕಂಬಳದ ದೃಶ್ಯವೊಂದಿದೆ. ಅದರಲ್ಲಿ ರಿಷಬ್ ಶೆಟ್ಟಿ ಅವರು ಕಂಬಳ ಕೋಣಗಳನ್ನು ಓಡಿಸುತ್ತಾರೆ. ಇದರಲ್ಲಿ ಕಾಣಿಸಿಕೊಂಡಿದ್ದ ಕೋಣ ಇದೀಗ ಮೃತಪಟ್ಟಿದೆ.
ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರ ಅಪ್ಪು ಎಂಬ ಕೋಣ ಶುಕ್ರವಾರ (ಆ.08) ಸಾವನ್ನಪ್ಪಿದೆ. ಕಾಂತಾರ ಚಿತ್ರದಲ್ಲಿ ಅಪ್ಪು ಮತ್ತು ಬೋಳಂಬಳ್ಳಿಯ ಮತ್ತೊಂದು ಕೋಣ ಕಾಲ ಕಾಣಿಸಿಕೊಂಡಿದ್ದವು.
ಚಿತ್ರೀಕರಣಕ್ಕೆ ಮೊದಲು ರಿಷಬ್ ಶೆಟ್ಟಿ ಅವರು ಪರಮೇಶ್ವರ ಭಟ್ ಅವರ ಬಳಿ ತರಬೇತಿ ಪಡೆದಿದ್ದರು. ಅಪ್ಪು ಮತ್ತು ಕಾಲ ಕೋಣಗಳನ್ನು ಓಡಿಸಿದ್ದರು.
ಜೂನಿಯರ್ ವಿಭಾಗದಲ್ಲಿ ಚಾಂಪಿಯನ್
ನೆಲ್ಲಿಕಾರಿನ ಶೇಣಿಕ್ ರಾಜ್ ಜೈನ್ ಅವರ ಬಳಿಯಿದ್ದ ಅಪ್ಪು ಕೋಣವನ್ನು ದಶಕದ ಹಿಂದೆ ಬೋಳದಗುತ್ತು ಸತೀಶ್ ಶೆಟ್ಟಿ ಅವರು ಕರೆತಂದಿದ್ದರು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿತ್ತು. ಬಳಿಕ ಬೋಳಂಬಳ್ಳಿ ಮನೆಗೆ ಸೇರಿತ್ತು
ಕುಂದಾಪುರ ಕಡೆಯಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಗಳಲ್ಲಿ ನಿರಂತರ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು. 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಬಂಟ್ವಾಳ, ಮೂಲ್ಕಿ ಮತ್ತು ಮಂಗಳೂರು ಕಂಬಳಗಳಲ್ಲಿ ಪ್ರಶಸ್ತಿ ಪಡೆದಿದ್ದವು.