ಡೈಲಿ ವಾರ್ತೆ: 09/ಆಗಸ್ಟ್/ 2025

ಜೀವ ತೆಗೆಯಿತು ವೈಟ್ ಶರ್ಟ್: ಟಾರ್ಗೆಟ್ ಮಾಡಿದವನನ್ನ ಬಿಟ್ಟು ಮತ್ತೊಬ್ಬನ ಹತ್ಯೆ

ಮಂಡ್ಯ: ವ್ಯಕ್ತಿಯೊಬ್ಬ ಧರಿಸಿದ್ದ ವೈಟ್‌ ಶರ್ಟ್‌ನಿಂದ ಟಾರ್ಗೆಟ್‌ ಮಾಡಿದವನನ್ನ ಬಿಟ್ಟು ಹಂತಕರ ಗ್ಯಾಂಗ್‌ ಮತ್ತೊಬ್ಬನನ್ನು ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆ ಬಳಿ ನಡೆದಿದೆ.

ವಡ್ಡರಹಳ್ಳಿ ಗ್ರಾಮದ ಅರುಣ್ (34) ಕೊಲೆಯಾದ ದುರ್ದೈವಿ.

ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಅರುಣ್‌ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶುಕ್ರವಾರ ರಾತ್ರಿ ಊರಿಗೆ ಬಂದಿದ್ದ. ಈ ವೇಳೆ 8-10 ಮಂದಿ ದುಷ್ಕರ್ಮಿಗಳು ಸೇರಿ ಲಾಂಗು, ಮಚ್ಚು, ಡ್ರ್ಯಾಗರ್‌ನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ.

ಅಷ್ಟಕ್ಕೂ ಕರಾಳ ರಾತ್ರಿಯಲ್ಲಿ ನಡೆದಿದ್ದೇನು?
ಶುಕ್ರವಾರ (ಆ.8) ರಾತ್ರಿ ಮೃತ ಅರುಣ್‌ ಸ್ನೇಹಿತ ಸೂರ್ಯ, ಸಹೋದರ ಉಮೇಶ್‌ ಹಾಗೂ ಸಂಬಂಧಿ ದೇವರಾಜ್‌ ಜೊತೆಗೆ ಬಾರ್‌ನಲ್ಲಿ ಪಾರ್ಟಿ ಮಾಡ್ತಿದ್ದ. ಬಾರ್‌ ಮುಂಭಾಗ ಸಿಕ್ಕ ವಿಕಾಸ್‌ ಎಂಬಾತನೊಂದಿಗೆ ಹಳೇ ದ್ವೇಷದ ಹಿನ್ನೆಲೆ ಸೂರ್ಯ ಕಿರಿಕ್‌ ತೆಗೆದಿದ್ದ. 2 ವರ್ಷಗಳ ಹಿಂದಿನ ಜಗಳದ ವಿಚಾರ ತೆಗದು ಸೂರ್ಯ ವಿಕಾಸ್‌ ಮೇಲೆ ಹಲ್ಲೆ ಮಾಡಿದ್ದ. ಆದ್ರೆ ಅರುಣ್‌ ಇವರಿಬ್ಬರ ಜಗಳ ಬಿಡಿಸಿ ಮತ್ತೆ ಪಾರ್ಟಿ ಮುಂದುವರಿಸಿದ್ದ. ಕೆಲ ಹೊತ್ತಿನ ಬಳಿಕ ದುಷ್ಕರ್ಮಿಗಳು ಸೂರ್ಯನ ಮೇಲೆ ಅಟ್ಯಾಕ್‌ಗೆ ಯತ್ನಿಸಿದ್ದರು, ಈ ವೇಳೆ ಸೂರ್ಯ & ಟೀಂ ಎಸ್ಕೇಪ್ ಆಯಿತು.

ಸೂರ್ಯ ವೈಟ್‌ ಶರ್ಟ್‌ ಹಾಕಿದ್ದಾನೆಂದು ವಿಕಾಸ್‌ ಸುಳಿವು ಕೊಟ್ಟಿದ್ದ. ಅದೇ ಸಮಯದಲ್ಲಿ ಅರುಣ್‌ ಕೂಡ ವೈಟ್‌ ಶರ್ಟ್‌ ಹಾಕಿದ್ದ. ಹಾಗಾಗಿ ವೈಟ್ ಶರ್ಟ್ ಹಾಕಿದ್ದ ಅರುಣ್‌ನನ್ನೇ ಸೂರ್ಯ ಎಂದು ತಿಳಿದು ಫಾಲೋ ಮಾಡಿದ್ದ ಹಂತಕರು, ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದ ಬಳಿ ಅರುಣ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ದುಷ್ಕರ್ಮಿಗಳು ಎರಗುತ್ತಿದ್ದಂತೆ ಅರುಣ್ ಸಂಬಂಧಿ ದೇವರಾಜು ತಪ್ಪಿಸಿಕೊಂಡು ಓಡಿದ್ದಾನೆ. ಬಳಿಕ ಅರುಣ್‌ಗೆ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದು, ತನಿಖೆ ಮುಂದುವರಿದಿದೆ.