


ಡೈಲಿ ವಾರ್ತೆ: 18/ಆಗಸ್ಟ್/ 2025


ಧರ್ಮಸ್ಥಳ: ‘ಬುರುಡೆ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; SIT ಮುಂದೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಸಾಕ್ಷಿದಾರ – ಹೇಳಿದ್ದೇನು?

ಧರ್ಮಸ್ಥಳ: ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ‘ಬುರುಡೆ’ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ನೇತ್ರಾವತಿ ನದಿ ದಡದಲ್ಲಿ ಮಹಿಳೆಯರು, ಯುವತಿಯರು ಸೇರಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಕಳೆದ 15 ದಿನಗಳಿಂದ ಶೋಧ ಕಾರ್ಯಕ್ಕೆ ಕಾರಣನಾಗಿದ್ದ ಸಾಕ್ಷಿದಾರ ಎಸ್ ಟಿಐ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಆತ ತೋರಿಸಿದ 17 ಜಾಗಗಳ ಪೈಕಿ ಕೇವಲ 2 ಜಾಗಗಳಲ್ಲಿ ಮಾನವ ಅಸ್ಥಿಪಂಜರ ಪತ್ತೆ ನಂತರ ವಿಶೇಷ ತನಿಖಾ ತಂಡ (SIT)ಅಧಿಕಾರಿಗಳು ಶೋಧ ಕಾರ್ಯ ಸ್ಥಗಿತಗೊಳಿಸಿ, ಕಳೆದ ಎರಡು ದಿನಗಳಿಂದ ಸಾಕ್ಷಿ-ದೂರುದಾರನ ತೀವ್ರ ವಿಚಾರಣೆ ನಡೆಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಅನಾಮಿಕ ಹೇಳಿದ್ದು ಏನು?:
2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೇ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹಾಕಿತ್ತು. 2023ರ ಡಿಸೆಂಬರ್ ನಲ್ಲಿ ತಮಿಳುನಾಡಿನಿಂದ ಗುಂಪು ನನನ್ನು ಕರೆತಂದಿತು. ಕೋರ್ಟ್ ಮುಂದೆ ಹೇಳಿಕೆ ನೀಡಲು ಭಯ ಆಗುತಿತ್ತು. ಮಹಿಳೆ (ಸುಜಾತ ಭಟ್) ದೂರಿನ ನಂತರ ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಧೈರ್ಯ ಬಂದಿತು. ಆ ಮಹಿಳೆಯೇ ನನ್ನಲ್ಲಿ ಧೈರ್ಯ ತುಂಬಿದರು. ಹೀಗಾಗಿ ನಾನು ಬಂದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ಹೇಳಿಕೆ ಸುಳ್ಳಾಗಿದ್ದರೆ ಕ್ರಮ- ಗೃಹ ಸಚಿವ ಪರಮೇಶ್ವರ
ಆ ಗುಂಪು ಬುರುಡೆ ತಂದು ಹೇಳಿದ ರೀತಿ ನಡೆದುಕೊಂಡೆ. ಪೊಲೀಸರ ಮುಂದೆ ಏನು ಹೇಳಬೇಕು ಎಂದು ಮೂವರು ಪ್ರತಿನಿತ್ಯ ಹೇಳಿಕೊಡುತ್ತಿದ್ದರು. ಅದೇ ರೀತಿಯಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ಮಾಸ್ಕ್ ಮ್ಯಾನ್ SIT ಅಧಿಕಾರಿಗಳ ಮುಂದೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ದೂರುದಾರನ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.