


ಡೈಲಿ ವಾರ್ತೆ: 19/ಆಗಸ್ಟ್/ 2025


ಹೆಬ್ರಿಯಲ್ಲಿ ಸಂಭ್ರಮ ಸಡಗರದ ಕೊರಗರ ಭೂಮಿ ಹಬ್ಬ

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ – ಕೇರಳ ವತಿಯಿಂದ ಆಗಸ್ಟ್ 18 ರಂದು 18ನೇ ವರ್ಷದ ಕೊರಗರ ಭೂಮಿ ಹಬ್ಬ ಹೆಬ್ರಿ ಬಡಾಗುಡ್ಡೆ ಸಮುದಾಯ ಭವನದಲ್ಲಿ ಆಚರಿಸಲಾಯಿತು.

ಹೆಬ್ರಿ ಬಸ್ ನಿಲ್ದಾಣದಿಂದ ಬಡಾಗುಡ್ಡೆ ಸಮುದಾಯ ಭವನಕ್ಕೆ ಹೊರಟ ಕಾಲ್ನಡಿಗೆ ಜಾಥಕ್ಕೆ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರನಾಥ ಬಂಗೇರರವರು ಡೋಲು ಬಾರಿಸುವುದರೊಂದಿಗೆ ಚಾಲನೆ ನೀಡಿ ಭೂಮಿ ಹಬ್ಬಕ್ಕೆ ಶುಭವನ್ನು ಕೋರಿದರು. ಜಾಥದಲ್ಲಿ ಡೋಲು, ಚೆಂಡೆ, ಕೊಳಲು ವಾದನಕ್ಕೆ ಮಕ್ಕಳು, ಮಹಿಳೆಯರು, ಯುವಜನರು, ವಯಸ್ಕರು ಸಂಭ್ರಮದಿಂದ ಕುಣಿದಾಡಿದರು. ಸುರಿಯುವ ಮಳೆಯನ್ನು ಲೆಕ್ಕಿಸದೆ ʼಆದಿವಾಸಿ ಕೀ ಜೈʼ, ʼಬಿರ್ಸ ಮುಂಡರಿಗೆ ಜೈʼ, ʼಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟಕ್ಕೆ ಜೈʼ ಎಂದು ಘೋಷಣೆ ಕೂಗುತ್ತ ಹೊರಟರು. ಬಡಾಗುಡ್ಡೆ ಸಮುದಾಯ ಭವನದ ಮುಂಭಾಗದಲ್ಲಿ ಭೂಮಿ ಹಬ್ಬದ ಧ್ವಜಾರೋಹಣವನ್ನು ಸಮುದಾಯದ ಮುಖಂಡರಾದ ಬೊಗ್ರ ಕೊಕ್ಕರ್ಣೆರವರು ನೆರವೇರಿಸಿ ಭೂಮಿ ಹಬ್ಬದ ಮಹತ್ವ ಮತ್ತು ವಿಶೇಷತೆಯನ್ನು ಸಾರಿದರು.

ನಂತರ ಕಾರ್ಯಕ್ರಮದಲ್ಲಿ ಭಾಗಿಯಾದ ಸಮುದಾಯ ಬಾಂಧವರೆಲ್ಲರಿಗೂ ಸಮುದಾಯದ ಐಕ್ಯತೆ ಮತ್ತು ಬಾಂಧವ್ಯದ ದ್ಯೋತಕವಾಗಿ ಲಕ್ಷ್ಮಿ ಕೆಂಜೂರು ಹಾಗೂ ಅಮ್ಮಣ್ಣಿ ಅಬ್ಲಿಕಟ್ಟೆ ರವರು ಸವಿ ಜೇನನ್ನು ವಿತರಿಸಿದರು. ವಿಶಾಲಾಕ್ಷಿ ಮತ್ತು ಶಾರದ ಹೆಬ್ರಿ ದೀಪ ಬೆಳಗಿಸಿ ಭೂಮಿ ಹಬ್ಬವನ್ನು ಉದ್ಘಾಟಿಸಿದರು. ಸುಪ್ರೀತಾ ಮತ್ತು ತಂಡದವರು ಧ್ಯೆಯಗೀತೆಯನ್ನು ಹಾಡಿದರು.

ಭೂಮಿ ಹಬ್ಬವನ್ನು ಉದ್ಘಾಟಿಸಿದ ನಂತರ ಒಕ್ಕೂಟದ ಸಂಯೋಜಕರು ಕೆ. ಪುತ್ರನ್ ಹಬ್ಬದ ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಜನಾ ಸಮನ್ವಯ ಅಧಿಕಾರಿ ಎಂ. ನಾರಾಯಣ ಸ್ವಾಮಿ ಭೂಮಿ ಹಬ್ಬದ ಕುರಿತು ಮಾತನಾಡಿದರು. ಕೊರಗ ಸಮುದಾಯದ ಯುವಜನರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಸಮುದಾಯ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡರವರು ಸಮುದಾಯ ಬೆಳೆದು ಬಂದ ಬಗ್ಗೆ ಹಾಗೂ ಸಮುದಾಯದ ವಾಸ್ತವ್ಯದ ಕುರಿತು ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಯೋಜನಾ ಸಮನ್ವಯ ಅಧಿಕಾರಿ ಎಂ. ನಾರಾಯಣ ಸ್ವಾಮಿ, ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಬೊಗ್ರ ಕೊಕ್ಕರ್ಣೆ, ಹೆಬ್ರಿ ಸಂಘದ ಅಧ್ಯಕ್ಷೆ ಉಷಾ ಹೆಬ್ರಿ, ವಿಶಾಲಾಕ್ಷಿ ಹೆಬ್ರಿ ಮತ್ತು ಶಾರದಾ ಹೆಬ್ರಿ ಉಪಸ್ಥಿತರಿದ್ದರು.

ಮಧ್ಯಾಹ್ನದ ಊಟದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಭೂಮಿ ಹಬ್ಬಕ್ಕೆ ಆಗಮಿಸಿದ ಸಮುದಾಯದ ಬಾಂಧವರೆಲ್ಲರೂ ಸೇರಿ ಡೋಲು ವಾದನಕ್ಕೆ ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮವನ್ನು ವಿಮಲ ಕಳ್ತೂರು ನಿರೂಪಿಸಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕರಾದ ಕೆ. ಪುತ್ರನ್ ಹೆಬ್ರಿ ಸ್ವಾಗತಿಸಿದರೆ, ಸಮುದಾಯ ಕಾರ್ಯಕರ್ತರಾದ ಸುಪ್ರಿಯ ಎಸ್. ಕಿನ್ನಿಗೋಳಿ ಧನ್ಯವಾದ ಗೈದರು.