


ಡೈಲಿ ವಾರ್ತೆ: 23/ಆಗಸ್ಟ್/ 2025


ಅನನ್ಯಾ ಅನ್ನೋ ಮಗಳೇ ನನಗಿಲ್ಲ, ನಾನು ಹೇಳಿದ್ದು ಸುಳ್ಳು: ಸುಜಾತಾ ಭಟ್ ಹೊಸ ಬಾಂಬ್!

ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣದ ಬೆನ್ನಲ್ಲೆ ಸದ್ದು ಮಾಡಿದ್ದು, ಅನನ್ಯಾ ಭಟ್ ನಾಪತ್ತೆ ಕೇಸ್. ಈಗ ಇದೇ ಕೇಸ್ಗೆ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅನನ್ಯಾ ಭಟ್ ಕಥೆ ಸುಳ್ಳು, ಅನನ್ಯಾ ಅನ್ನೋ ಮಗಳೇ ನನಗೆ ಇರಲಿಲ್ಲ. ನಾನು ಹೇಳಿದ್ದು ಸುಳ್ಳು ಎಂದು ಸುಜಾತಾ ಭಟ್ ತಪ್ಪೊಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಗಿರೀಶ್ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು ಹೇಳಿದ್ದೆ ಹೊಸ ಬಾಂಬ್ ಸಿಡಿಸಿದ್ದಾರೆ. ಆ ಮೂಲಕ ಹೋರಾಟಗಾರರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಮತ್ತೆ ಉಲ್ಟಾ ಹೊಡೆದ ಸುಜಾತಾ ಭಟ್!
‘ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್ 2003ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು. ಮಗಳ ಅಸ್ಥಿಯನ್ನಾದರೂ ಹುಡುಕಿಕೊಡಿ’ ಅಂತಾ ಸುಜಾತಾ ಭಟ್ ದೂರು ಸಲ್ಲಿಸಿದ್ದರು. ಮೊನ್ನೆ ಮೊನ್ನೆ ಫೋಟೋ ಒಂದನ್ನು ತೋರಿಸಿ ಈಕೆಯೇ ತನ್ನ ಪುತ್ರಿ ಅನನ್ಯಾ ಭಟ್ ಅಂತ ಹೇಳಿದ್ದರು. ಆದರೆ ಸುಜಾತಾಳಿಗೆ ಮಗಳೇ ಇರಲಿಲ್ಲ ಅಂತಾ ಅವರ ಸಹೋದರ ತಿಳಿಸಿದ್ದರು. ಇನ್ನೊಂದೆಡೆ ಸುಜಾತಾ ತೋರಿಸಿದ್ದು ನನ್ನ ತಂಗಿ ವಾಸಂತಿ ಫೋಟೋ ಅಂತಾ ಮಡಿಕೇರಿಯ ವಿಜಯ್ ಅನ್ನೋರು ಮುಂದೆ ಬಂದಿದ್ದರು. ಆದರೆ ಇದಕ್ಕೆ ನಿನ್ನೆ ಉತ್ತರ ಕೊಟ್ಟಿದ್ದ ಸುಜಾತಾ ಮಂಜುನಾಥ ಆಣೆಗೂ ಅನನ್ಯಾ ಭಟ್ ನನ್ನ ಮಗಳೇ ಎಂದಿದ್ದರು.
ಆಸ್ತಿಗಾಗಿ ಅನನ್ಯಾ ಭಟ್ ಕಥೆ ಕಟ್ಟಿದ್ದೆ!
ಆಸ್ತಿಯ ವಿಚಾರಕ್ಕೆ ಈ ವಿಚಾರ ಹೇಳಿ ಅಂತಾ ಹೇಳಿದರು. ಅದಕ್ಕೆ ನಾನು ಹೇಳಿದೆ. ಅನನ್ಯಾ ಭಟ್ ಅಂತಾ ನಾನು ರಿಲೀಸ್ ಮಾಡಿದ ಫೋಟೋ ಎಲ್ಲಾ ಫೇಕ್. ನಾನು ಧರ್ಮಸ್ಥಳ ಜನರ, ಭಕ್ತರ ಭಾವನೆಗಳ ಜೊತೆ ಆಟ ಆಡಿಲ್ಲ. ಆಟ ಆಡುವ ಹಾಗೆ ಇವರು ಮಾಡಿದರು. ನನ್ನನ್ನು ಪ್ರವೋಕ್ ಮಾಡಿದರು. ನನ್ನ ತಾತನ ಆಸ್ತಿಗೋಸ್ಕರ ನಾನು ಅನನ್ಯಾ ಭಟ್ ಕಥೆಯನ್ನ ಕಟ್ಟಿದ್ದೀನಿ. ನನಗೆ ಈ ರೀತಿ ಆಗುತ್ತೆ, ಇಷ್ಟರ ಮಟ್ಟಿಗೆ ಇದು ಹೋಗುತ್ತೆ ಅನ್ನೋದು ಗೊತ್ತಿರಲಿಲ್ಲ, ಇವರು ನನ್ನನ್ನ ದುರುಪಯೋಗ ಮಾಡಿಕೊಂಡು ಬಿಟ್ಟರು. ನಾನು ದೇಶದ ಜನತೆಗೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ಧರ್ಮಸ್ಥಳಕ್ಕೂ ನಾನು ಕ್ಷಮೆ ಕೇಳುತ್ತೇನೆ, ನನ್ನನ್ನ ಇದರಿಂದ ಮುಕ್ತಿಗೊಳಿಸಿ ಎಂದು ಯೂಟ್ಯೂಬ್ ಚಾನಲ್ವೊಂದಕ್ಕೆ ಸುಜಾತಾ ಭಟ್ ಹೇಳಿಕೆ ಕೊಟ್ಟಿದ್ದರು.
‘ರೌಡಿಸಂ ಮಾಡಿ, ಬೆದರಿಕೆ ಹಾಕಿ ಯೂಟ್ಯೂಬ್ನಲ್ಲಿ ಹೇಳಿಕೆ ಕೊಡಿಸಿದ್ದಾರೆ’!
ಯೂಟ್ಯೂಬ್ನಲ್ಲಿ ಸುಜಾತಾ ಭಟ್ ನೀಡಿದ್ದ ಹೇಳಿಕೆ ದೊಡ್ಡ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೆ, ಮತ್ತೆ ಮಾಧ್ಯಮಗಳ ಮುಂದೆ ಬಂದ ಸುಜಾತಾ ಭಟ್, ಸ್ಫೋಟಕ ಆರೋಪ ಮಾಡಿದರು. ನನಗೆ ಸಹಾಯ ಮಾಡುತ್ತೇವೆ ಅಂತಾ ಹೇಳಿ, ನನ್ನ ಮೇಲೆ ರೌಡಿಸಂ ಮಾಡಿ ಆ ರೀತಿ ಹೇಳಿಕೆ ಕೊಡಿಸಿದ್ದಾರೆ ಅಂತಾ ಹೇಳಿದ್ದಾರೆ. ಇಷ್ಟೇ ಅಲ್ಲ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧವೂ ಹೇಳಿಕೆ ಕೊಟ್ಟರೆ ನಿಮ್ಮನ್ನ ಬಚಾವ್ ಮಾಡುತ್ತೇವೆ ಅನ್ನೋದಾಗಿ ಹೇಳಿದ್ದರಂತೆ.
ಮಾನವೀಯತೆ ದೃಷ್ಟಿಯಿಂದ ನೆರವು ನೀಡಿದ್ವಿ: ಗಿರೀಶ್ ಮಟ್ಟಣ್ಣನವರ್
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಗಿರೀಶ್ ಮಟ್ಟಣ್ಣನವರ್, ನಾನೇನೂ ಸುಜಾತಾ ಭಟ್ ಅವರನ್ನ ಸಂಪರ್ಕಿಸಿರಲಿಲ್ಲ, ಅವರೇ ನಮ್ಮ ಬಳಿ ಬಂದಿದ್ದರು. ನಮಗೆ ಮೊದಲು ಅವರು ಅನನ್ಯ ಫೋಟೋ ಆಗಲಿ, ಬರ್ತ್ ಸರ್ಟಿಫಿಕೆಟ್ ಆಗಲಿ ಕೊಟ್ಟಿಲ್ಲ. ಹೀಗಿದ್ದರೂ ಮಾನವೀಯತೆ ದೃಷ್ಟಿಯಿಂದ ಅವರಿಗೆ ನೆರವು ನೀಡಿದ್ವಿ ಎಂದಿದ್ದಾರೆ.
ಸುಜಾತಾ ಭಟ್ ನಂಬಿದ್ದು ನಮಗೆ ಮುಳುವಾಯ್ತು ಎಂದ ಜಯಂತ್
ಇನ್ನು ನಿನ್ನೆ ಮಾಧ್ಯಮದ ಜೊತೆ ಮಾತನಾಡಿದ್ದ ಧರ್ಮಸ್ಥಳ ಸಾಮಾಜಿಕ ಹೋರಾಟಗಾರ ಜಯಂತ್, ಸುಜಾತಾ ಅವರನ್ನ ನಂಬಿದ್ದು, ನಮಗೆ ಮುಳುವಾಗಿದೆ. ಇನ್ಮುಂದೆ ಅವರ ಪ್ರಕರಣಗಳಲ್ಲಿ ತಲೆ ಹಾಕಲ್ಲ ಅಂತಾ ಹೇಳಿದ್ದಾರೆ.
ಸದ್ಯ ಅನನ್ಯಾ ಭಟ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಯಾವುದು ಸತ್ಯ, ಯಾವುದು ಸುಳ್ಳು, ಯಾರದು ಸರಿ, ಯಾರದು ತಪ್ಪು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.