ಡೈಲಿ ವಾರ್ತೆ: 23/ಆಗಸ್ಟ್/ 2025

ಮುಳೂರು: ಭೀಕರ ಕಾರು ಅಪಘಾತ – ಖ್ಯಾತ ಡಿಜೆ ಮರ್ವಿನ್ ಸಾವು, ಮೂವರು ಗಂಭೀರ!

ಕಾಪು: ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದು ಓರ್ವ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಶನಿವಾರ ಮುಂಜಾನೆ ಕಾಪು ತಾಲೂಕಿನ ಮುಳೂರು ಬಳಿ ಸಂಭವಿಸಿದೆ

ಮೃತರನ್ನು ಖ್ಯಾತ ಯುವ ಡಿಜೆ, ನವವಿವಾಹಿತ ಮರ್ವಿನ್ ಮೆಂಡೋನ್ಸಾ (35) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಕಾರು ಚಾಲಕ ಅಂಬಲಪಾಡಿಯ ಪ್ರಜ್ವಲ್, ಕಾರ್ಕಳದ ಪ್ರಸಾದ್ ಮತ್ತು ವಿಶ್ಲೇಶ್ ಎಂದು ತಿಳಿದು ಬಂದಿದೆ.

ಇವರು ಕಾರಿನಲ್ಲಿ ಅಂಬಲಪಾಡಿಯಿಂದ ಬೆಳ್ಮಣ್ ಗೆ ಹೋಗುತ್ತಿದ್ದಾಗ ನಾಯಿಯೊಂದು ಕಾರಿಗೆ ಅಡ್ಡ ಬಂದಿದೆ ಎನ್ನಲಾಗಿದೆ. ಇದರ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಚ್ಚಿಲ ಹಾಗೂ ಮೂಳೂರಿನ ಎಸ್‌ಡಿಪಿಐ ಆಂಬುಲೆನ್ಸ್ ಗಳು ಗಾಯಾಳುಗಳನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಆಂಬುಲೆನ್ಸ್‌ ಚಾಲಕರದ ಕೆ.ಎಂ.ಸಿರಾಜ್, ಹಮೀದ್ ಹಾಗೂ ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ ಸಹಕರಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.