ಡೈಲಿ ವಾರ್ತೆ: 01/ಸೆ./2025

ಸುಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಂವಾದ: ತೃಪ್ತಿ ಎಂಬ ಮೌಲ್ಯ ವ್ಯಕ್ತಿತ್ವದ ಭಾಗವಾಗಲಿ – ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಕುಂದಾಪುರ: ವ್ಯಕ್ತಿತ್ವದಲ್ಲಿ ತೃಪ್ತಿ ಎನ್ನುವ ಮೌಲ್ಯವನ್ನು ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸೋಮವಾರ ನುಡಿದರು.

ಕುಂದಾಪುರದ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾನೂನು ಬರುವ ಮೊದಲೇ ಸಮಾಜದಲ್ಲಿ ಕೆಲವು ಮೌಲ್ಯಗಳಿದ್ದವು. ಜನರು ಅದಕ್ಕೆ ಗೌರವ ನೀಡುತ್ತಿದ್ದರು. ಆದರೆ ಈಗ ಆ ಸಮಾಜ ಬದಲಾಗಿದೆ. ಶ್ರೀಮಂತರಿಗೆ ಮಣೆ ಹಾಕುವ ಪ್ರವೃತ್ತಿ ತಾಂಡವವಾಡುತ್ತಿದೆ. ಪ್ರಾಮಾಣಿಕತೆಗೆ, ಪ್ರಾಮಾಣಿಕರಿಗೆ ಬೆಲೆ ಇಲ್ಲದ ಹಾಗೇ ಆಗಿದೆ. ದುರಾಸೆ ಎಂಬ ರೋಗ ಇದಕ್ಕೆ ಕಾರಣವಾಗಿದೆ” ಎಂದು ವಿವರಿಸಿದರು.

ಹಿಂದೆಲ್ಲಾ ತಪ್ಪು ಮಾಡಿದವರಿಗೆ ಅವರನ್ನು ದೂರ ಇಡುವ ಮೂಲಕ ಶಿಕ್ಷೆ ನೀಡಲಾಗುತ್ತಿತ್ತು. ಆದರೆ ಈಗ ಜೈಲಿಗೆ ಹೋಗಿ ಜಾಮೀನಿನ ಮೂಲಕ ಹೊರಗೆ ಬಂದವನಿಗೆ ಹಾರ ತುರಾಯಿ ಹಾಕಿ ಸ್ವಾಗತ ಕೋರುತ್ತೇವೆ. ಪ್ರಾಮಾಣಿಕತೆ, ಮೌಲ್ಯಗಳು ಹಣದ ಮುಂದೆ ಗೌಣ್ಯವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಹೆಗ್ಡೆ ಅವರು, ಕ್ರಾಂತಿ ಮೂಲಕ ಬದಲಾವಣೆ ಆದರೆ ಈ ದೇಶ ಒಡೆದು ಚೂರಾಗುತ್ತದೆ; ಶಾಂತಿ ಸೌಹಾರ್ದ ಮರೆಯಾಗುತ್ತದೆ; ನಾವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು; ಕಷ್ಟಕ್ಕೆ ಸ್ಪಂದಿಸುವ ಮನೋಭಾವಗಳನ್ನು ಹೊಂದಿರಬೇಕು; ಅಕ್ರಮವಾಗಿ ಗಳಿಸಿದ ಹಣದಿಂದ ಎಂದಿಗೂ ನೆಮ್ಮದಿ ಸಾಧ್ಯವಿಲ್ಲ; ತೃಪ್ತಿ ಎಂಬ ಮೌಲ್ಯ ಅಳವಡಿಸಿಕೊಂಡರೆ ನೆಮ್ಮದಿಯ ನಿದ್ರೆ ಮಾಡಬಹುದು ಎಂದು ನುಡಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, “ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟುವುದಕ್ಕೆ ನಮ್ಮ ಯುವಕರನ್ನು ಸೃಷ್ಟಿ ಮಾಡಬೇಕು ಎಂಬ ಪಣ ತೊಟ್ಟು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿರಿಯ ವಯಸ್ಸಿನಲ್ಲಿಯೂ ಅವರ ಉತ್ಸಾಹ, ದೇಶಪ್ರೇಮ, ಮುಂದಿನ ಜನಾಂಗದ ಬಗ್ಗೆ ಕಾಳಜಿ ಅನುಕರಣೀಯವಾದುದು” ಎಂದರು.

“ಸಂತೋಷ್ ಹೆಗ್ಡೆಯವರು ದೇಶದಲ್ಲಿನ ಭ್ರಷ್ಟಾಚಾರ, ಅನ್ಯಾಯಗಳ ವಿರುದ್ಧ ದನಿ ಎತ್ತಿದವರು. ನಿವೃತ್ತಿ ಜೀವನದಲ್ಲಿಯೂ ಕೈ ಕಟ್ಟಿ ಕುಳಿತವರಲ್ಲ. ಈ ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ ಎಂದು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂತೋಷ ಹೆಗ್ಡೆಯವರ ಮೌಲ್ಯಗಳನ್ನು, ಅವರು ಪಾಲಿಸಿದ ತತ್ವಗಳನ್ನು ಅನುಸರಿಸಿದರೆ ಸದೃಢ ದೇಶ ಕಟ್ಟಬಹುದು. ವಿದ್ಯಾರ್ಥಿಗಳು ತಪ್ಪುಗಳನ್ನು ತಿದ್ದಿಕೊಳ್ಳುವಂತಹ ಗುಣ ಬೆಳೆಸಿಕೊಳ್ಳಬೇಕು. ಎಸಗಿದ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟರೆ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ಪ್ರತಾಪ್ ಚಂದ್ರ ಶೆಟ್ಟಿ ಕಿವಿಮಾತು ನುಡಿದರು.

ಸಂಸ್ಥೆಯ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ನಿರೂಪಿಸಿದರು.ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.