ಡೈಲಿ ವಾರ್ತೆ: 03/ಸೆ./2025

ಶಿರ್ವ| ಮಗು ಮಾರಾಟ ಜಾಲ ಪತ್ತೆ – ದುರ್ಗಾವಾಹಿನಿ ಮುಖಂಡೆ ಸಹಿತ ಮೂವರ ಬಂಧನ

ಕಾಪು: ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಡಾ.ಸೋಮೇಶ್ ಸೊಲೊಮನ್, ವಿಜಯಲಕ್ಷ್ಮೀ ಯಾನೆ ವಿಜಯ, ನವನೀತ್ ನಾರಾಯಣ ಬಂಧಿತ ಆರೋಪಿಗಳು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ

ಕಾಪುವಿನ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಮತ್ತು ಆಕೆಯ ಪತಿ ರಮೇಶ್ ಮೂಲ್ಯ ದಂಪತಿಗಳು 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್ ನಲ್ಲಿ ರಿಜಿಸ್ಟರ್ ಮಾಡಲು ಅಂಗನವಾಡಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪರಿಶಿಲಿಸಿದಾಗ ಮಗು ದಂಪತಿಗಳಿಗೆ ಸೇರಿದ್ದು ಅಲ್ಲ ಎಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆಗೆ ಅನುಮಾನ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮಂಗಳೂರಿನ Colaco ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಅವರಿಗೆ ಹಣ ನೀಡಿ ಆಸ್ಪತ್ರೆಯ ಮುಖಾಂತರ ಮಗುವನ್ನು ಪಡೆದುಕೊಂಡು ಬಂದಿರುವ ಮಾಹಿತಿಯನ್ನು ದಂಪತಿಗಳು ತಿಳಿಸಿದ್ದಾರೆ.

ಬಳಿಕ ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಭಾವತಿಯವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ
ಆ.03 ರಂದು ಜನಿಸಿದ ಮಗುವನ್ನು ಮಂಗಳೂರಿನ ಕುಲಾಸೋ ಆಸ್ಪತ್ರೆಯ ವೈದ್ಯರು ತಮಗೆ ನೀಡಿರುವುದಾಗಿ ಮತ್ತು ಪ್ರಭಾವತಿರವರ ಚಿಕ್ಕಮ್ಮನ ಮಗಳು ಪ್ರಿಯಾಂಕರವರು ಮಗುವಿನ ಹೆರಿಗೆಯಾಗುವ ಬಗ್ಗೆ ವಿಚಾರವನ್ನು ತಿಳಿಸಿ ಆಸ್ಪತ್ರೆಯ ವೈದ್ಯರ ಮುಖಾಂತರ ರೂ 4.5 ಲಕ್ಷ ಹಣವನ್ನು ನೀಡಿ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.