


ಡೈಲಿ ವಾರ್ತೆ: 06/ಸೆ./2025


ಧರ್ಮ ಸಂರಕ್ಷಣೆ ಯಾತ್ರೆಗೆ ಆಹ್ವಾನ ನೀಡಲು ಮನೆಗೆ ಬಂದ ಯುವತಿಗೆ ಲೈಂಗಿಕ ದೌರ್ಜನ್ಯ – ಧರ್ಮಸ್ಥಳ ಜನಜಾಗೃತಿ ಸಂಘದ ಮಾಜಿ ಜಿಲ್ಲಾಧ್ಯಕ್ಷ ನವೀನಚಂದ್ರ ಶೆಟ್ಟಿ ವಿರುದ್ಧ ದೂರು ದಾಖಲು: ಕರಾವಳಿಯಲ್ಲಿ ಧರ್ಮ ರಕ್ಷಕರು ಭಕ್ಷಕರಾದರೇ.? – ಕೋಟ ನಾಗೇಂದ್ರ ಪುತ್ರನ್

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಮುತ್ತು ಕೊಟ್ಟ ಬಗ್ಗೆ ಪ್ರಕರಣ ದಾಖಲಾಗಿದೆ.
ದೂರುದಾರೆ ಧರ್ಮಸ್ಥಳದ ಧರ್ಮ ಸಂರಕ್ಷಣಾಯಾತ್ರೆಯ ಸಭೆಯ ಬಗ್ಗೆ ರಟ್ಟಾಡಿ ಶ್ರೀ ರಟ್ಟೆಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮುಖ್ಯಸ್ಥ, ನವೀನಚಂದ್ರ ಶೆಟ್ಟಿ ರಟ್ಟಾಡಿಗೆ ಕಾರ್ಯಕ್ರಮ ಆಹ್ವಾನ ಪತ್ರಿಕೆ ಕೊಡಲು ತೆರಳಿದ್ದರು. ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿಯ ಮನೆಗೆ ಬರುವಂತೆ ಕರೆದ ಆರೋಪಿ ಆಹ್ವಾನ ಪತ್ರಿಕೆ ಪಡೆಯುವಾಗ ಯುವತಿಯ ಕೈಯನ್ನು ಸ್ವರ್ಶಿಸಿದ್ದಾನೆ. ಇದರಿಂದ ಯುವತಿಗೆ ಮುಜುಗರ ಉಂಟಾಗಿದ್ದು ನಂತರ ಆಕೆ ಹೊರಡಲು ಅನುವಾದಾಗ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿದ ಆರೋಪಿ ಹತ್ತಿರಕ್ಕೆ ಎಳೆದುಕೊಂಡು ಬಲ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಗಾಬರಿಗೊಂಡ ಯುವತಿ ಅಲ್ಲಿಂದ ತಕ್ಷಣ ಎದ್ದು ಹೊರಟರೂ ಮನೆಗೆ ಬರುವಂತೆ ಹೇಳುತ್ತಾ ಮನೆಯ ಬಾಗಿಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಅ.ಕ್ರ .ನಂ. 29-2025 ಕಲಂ 75 ಬಿ. ಎನ್. ಎಸ್ ನಂತೆ ಪ್ರಕರಣ ದಾಖಲಾಗಿದೆ
ಕರಾವಳಿಯಲ್ಲಿ ಧರ್ಮ ರಕ್ಷಕರು ಭಕ್ಷಕರಾದರೇ.?– ಕೋಟ ನಾಗೇಂದ್ರ ಪುತ್ರನ್:
ಬಿಜೆಪಿಯ ನಾಯಕ, ಮಾಜಿ ತಾಲೂಕು ಪಂಚಾಯ್ತ್ ಸದಸ್ಯ, ಧರ್ಮಸ್ಥಳ ಜನಜಾಗೃತಿ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ, ರಟ್ಟಾಡಿ ರಟ್ಟೆಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರ, ನವೀನ್ ಚಂದ್ರ ಶೆಟ್ಟಿಯಂತಹ ಕಾಮ ಕೀಚಕನಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಹಿಂದೂ ಗಳಿಗೆ ಕಪ್ಪು ಮಸಿ ಬಳಿದಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಪ್ರತಿಕ್ರಿಯಿಸಿದ್ದಾರೆ.
ಧರ್ಮ ರಕ್ಷಣೆ ಹೆಸರಿನಲ್ಲಿ ಧರ್ಮಸ್ಥಳ ಸಂಘದ ಸದಸ್ಯೆಯನ್ನೆ ಮನೆಗೆ ಕರೆಸಿ ಬಲತ್ಕಾರ ಮಾಡಲು ಮುಂದಾಗಿರುವ ಈ ಬಿಜೆಪಿ ನಾಯಕರಿಂದ ಧರ್ಮ ರಕ್ಷಣೆ ಅಸಾಧ್ಯ. ನಮ್ಮ ಧರ್ಮ ಪುರಾತನ ಕಾಲ ದಿಂದ ಸುಸಜ್ಜಿತವಾಗಿದೆ, ನಿಮ್ಮಂತ ಕಾಮಂದರಿಂದ ನಮ್ಮ ಧರ್ಮ ರಕ್ಷಣೆ ಅಗತ್ಯ ಇಲ್ಲ, ಎಷ್ಟೇ ಒತ್ತಡಗಳು ಇದ್ದರು ಇಂತಹ ಕಾಮಂದರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸ್ ಇಲಾಖೆ ಹಾಗೂ ಅನ್ಯಾಯಕ್ಕೆ ಒಳಗಾದ ಸಂತ್ರಸ್ಥೆ ಅವರಿಗೆ ಧನ್ಯವಾದಗಳು ಎಂದಿದ್ದಾರೆ.