ಡೈಲಿ ವಾರ್ತೆ: 04/ಅ./2025

ನೆಲಮಂಗಲ |ಶಾರ್ಟ್‌ಸರ್ಕ್ಯೂಟ್‌ನಿಂದ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ – ಲಕ್ಷಾಂತರ ರೂ. ನಷ್ಟ

ನೆಲಮಂಗಲ: ಲಾರಿಯ ಇಂಜಿನ್‌ನಲ್ಲಿ ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮಾರುಕಟ್ಟೆಗೆ ಹೊರಟಿದ್ದ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿಯಾಗಿರುವ ಘಟನೆ ಅ. 4 ರಂದು ಬೆಳಿಗ್ಗೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೂದಿಹಾಳ್ ಗೇಟ್ ಬಳಿ ಸಂಭವಿಸಿದೆ.

ಈರುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗದಿಂದ ನೆಲಮಂಗಲದ ದಾಸನಪುರ ಎಪಿಎಂಸಿಗೆ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಲಾರಿಯ ಇಂಜಿನ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಂಕಿಗಾಹುತಿಯಾಗಿದೆ.

ಈರುಳ್ಳಿ ನಾಶದಿಂದ ರೈತ ಕಂಗಾಲಾಗಿದ್ದು, ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.