ಡೈಲಿ ವಾರ್ತೆ: 10/ಅ./2025

ಮಂಗಳೂರು: ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲು ಶರಣಾಗತಿ

ಮಂಗಳೂರು: ಎಸ್​​​​ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದೂ ಸಂಘಟನೆ ಮುಖಂಡ ಭರತ್​ ಕುಮ್ಡೇಲು ಶುಕ್ರವಾರ ಮಂಗಳೂರು ನ್ಯಾಯಾಲಯಕ್ಕೆ ಸರೆಂಡರ್ ಆಗಿದ್ದಾರೆ.

3, 4 ತಿಂಗಳು ವಿಚಾರಣೆಗೆ ಹಾಜರಾಗದೆ ಭರತ್​ ಕುಮ್ಡೇಲು ತಪ್ಪಿಸಿಕೊಂಡಿದ್ದರು.
ಎಸ್​​​​ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಎರಡು ಪ್ರಕರಣದಲ್ಲಿ ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದಾರೆ. ಅಬ್ದುಲ್ ರಹಿಮಾನ್ ಕೊಲೆ ಕೇಸ್​ನಲ್ಲಿ ಭರತ್ ಕುಮ್ಡೇಲು ತಲೆಮರೆಸಿಕೊಂಡಿದ್ದರು.

ಕಳೆದ 3-4 ತಿಂಗಳು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್​ಗೆ ಹಾಜರಾಗದ ಕಾರಣ ವಾರಂಟ್ ಜಾರಿಯಾಗಿತ್ತು. ಜೊತೆಗೆ ಕೆಲ ದಿನಗಳ ಹಿಂದಷ್ಟೇ ಭರತ್ ಕುಮ್ಡೇಲು ಸೇರಿದಂತೆ ಕೆಲ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್​ ದಾಖಲಿಸಲಾಗಿತ್ತು. ವಾರಂಟ್ ಮತ್ತು ಕೋಕಾ ಕೇಸ್​​ ಹಿನ್ನೆಲೆ ಸದ್ಯ ಭರತ್ ಜಿಲ್ಲಾ ಕೋರ್ಟ್​​ಗೆ ಶರಣಾಗಿದ್ದಾರೆ.

ಘಟನೆ ಹಿನ್ನೆಲೆ:
2017 ಜೂನ್ 21 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜಿನಪದವು ಗ್ರಾಮದಲ್ಲಿ ಆಟೋ ಚಾಲಕ ಮಹಮ್ಮದ್ ಅಶ್ರಫ್​​ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅಶ್ರಫ್​ ಅಮ್ಮುಂಜೆ ಗ್ರಾಮದ ಎಸ್​ಡಿಪಿಐ ಪಕ್ಷದ ಅಧ್ಯಕ್ಷರಾಗಿದ್ದರು. ಆಟೋ ಚಾಲಕರೂ ಆಗಿದ್ದರು. ಪಕ್ಷದ ಧ್ವಜ ಸಂಸ್ಥಾಪನ ದಿನದಲ್ಲಿ ಪಾಲ್ಗೊಂಡ ಬಳಿಕ ವಾಡಿಕೆಯಂತೆ ಶೀನಪ್ಪ ಪೂಜಾರಿ ಎಂಬುವವರ ಜೊತೆ ಬೆಂಬನಪದವಿಗೆ ಆಟೋ ಬಾಡಿಗೆಗೆ ತೆರಳಿದ್ದರು. ಈ ವೇಳೆ ಬೈಕ್​​ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳ ತಂಡ ಅಶ್ರಫ್​​ರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು.

ದಿವ್ಯರಾಜ್ ಮತ್ತು ಭರತ್ ಕುಮ್ಡೇಲು ಪ್ರಕರಣದ ಪ್ರಮುಖ ಕೊಲೆ ಆರೋಪಿಗಳು. ಅಶ್ರಫ್ ಕಲಾಯಿ ಹತ್ಯೆಗೆ ಪ್ರತೀಕಾರವಾಗಿ 2017 ಜುಲೈ 04ರಲ್ಲಿ ಆರ್​​ಎಸ್​​ಎಸ್​​ ಕಾರ್ಯಕರ್ತ ಶರತ್​ ಮಾಡಿವಾಳ ಹತ್ಯೆ ಮಾಡಲಾಗಿತ್ತು.

ಇನ್ನು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ ಎಂಬಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪಿಕಪ್ ವಾಹನ ಚಾಲಕನಾಗಿದ್ದ ಅಬ್ದುಲ್ ರಹಿಮಾನ್​​ನನ್ನು ಕೊಲೆ ಮಾಡಲಾಗಿತ್ತು. ಗೂಂಡಾ ಪಡೆ ಏಕಾಏಕಿ ತಲವಾರಿನಿಂದ ದಾಳಿ ನಡೆಸಿತ್ತು. ಪರಿಣಾಮ ಇಮ್ತಿಯಾಜ್ ಅಲಿಯಾಸ್ ಅಬ್ದುಲ್ ರಹಿಮಾನ್ ಸ್ಥಳದಲ್ಲೇ ಮೃತಪಟ್ಟಿದ್ದ.