ಡೈಲಿ ವಾರ್ತೆ: 18/ಅ./2025

ಕಲಬುರಗಿ| ಆರ್‌ಎಸ್‌ಎಸ್ ಅಳವಡಿಸಿದ್ದ ಬ್ಯಾನರ್, ಭಗವಾಧ್ವಜ ತೆರವು

ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಅ.19 ರಂದು ಭಾನುವಾರ ಪಥ ಸಂಚಲನ ಕಾರ್ಯಕ್ರಮ ಆಯೋಜನೆ ಮಾಡಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ಮುಖ್ಯ ಬೀದಿಗಳಲ್ಲಿ ಅಳವಡಿಸಿದ್ದ ಬಂಟಿಂಗ್ಸ್, ಭಗವಾಧ್ವಜ ಮತ್ತು ಕಟೌಟ್‌ಗಳನ್ನು ಶುಕ್ರವಾರ ರಾತ್ರಿ ಪುರಸಭೆ ಆಡಳಿತವು ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದೆ.

ಬ್ಯಾನ‌ರ್ ಮತ್ತು ಕಟೌಟ್ ತೆರವು ಮಾಡುತ್ತಿರುವ ವಿಷಯ ತಿಳಿಯುತ್ತಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಲಾಡ್ಜಿಂಗ್ ಕ್ರಾಸ್‌ಗೆ ದೌಡಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಥ ಸಂಚಲನಕ್ಕೆ ಅನುಮತಿ ಕೋರಿ ಬಂದಿರುವ ಅರ್ಜಿ ಕುರಿತು ವರದಿ ನೀಡುವಂತೆ ತಹಶೀಲ್ದಾರ್ ಅವರು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದಾರೆ. ಹೀಗಾಗಿ ಇನ್ನೂ ತಾಲೂಕು ಆಡಳಿತದಿಂದ ಪಥಸಂಚಲನ ಕಾರ್ಯಕ್ರಮ ನಡೆಸಲು ಅಧಿಕೃತವಾಗಿ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮಗಳನ್ನು ನಿಷೇಧ ಮಾಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಹೀಗಾಗಿ ಪಟ್ಟಣದಲ್ಲಿ ಪಥ ಸಂಚಲನ ಯಶಸ್ವಿಗೊಳಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಶತಾಯಗತಾಯ ಯತ್ನಿಸುತ್ತಿವೆ.