ಡೈಲಿ ವಾರ್ತೆ: 19/ಅ./2025

ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ ಪತಿ ಬಂಧನ

ಆನೇಕಲ್: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಕುಮಾರ್ ಬಂಧಿತ ಆರೋಪಿ.
ಪತ್ನಿ ರೇಷ್ಮಾಳನ್ನು (32) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತ ಮಹಿಳೆ ರೇಷ್ಮಾ ಗೆ ಮದುವೆಯಾಗಿ ಪತಿ ಸಾವನ್ನಪ್ಪಿದ್ದ. ತನ್ನ 15 ವರ್ಷದ ಮಗಳೊಂದಿಗೆ ರೇಷ್ಮಾ ಶಿಕಾರಿಪಾಳ್ಯದ ಓಂಶಕ್ತಿ ಲೇಔಟ್‌ನಲ್ಲಿ ವಾಸವಾಗಿದ್ದರು. ಇದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ ಆರೋಪಿ ಪ್ರಶಾಂತ್ ಕುಮಾರ್ ಪರಿಚಯವಾಗಿತ್ತು.

ನಂತರ ಇಬ್ಬರ ನಡುವೆ ಪ್ರೀತಿ ಶುರುವಾಗಿ ಕಳೆದ 9 ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಪತ್ನಿಯ ಶೀಲ ಶಂಕಿಸಿ ಪ್ರಶಾಂತ್ ಪ್ರತಿದಿನ ಜಗಳವಾಡುತ್ತಿದ್ದ.

ಅ.15ರಂದು ಇಬ್ಬರ ಮಧ್ಯೆ ಜಗಳವಾಗಿ ತಾರಕಕ್ಕೇರಿತ್ತು. ಗಲಾಟೆಯಲ್ಲಿ ರೇಷ್ಠಾಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಬಾತ್ ರೂಮ್ ನಲ್ಲಿ ಮೃತದೇಹ ಹಾಕಿ, ವಾಟರ್ ಹೀಟರ್ ಸ್ವಿಚ್ ಆನ್ ಮಾಡಿ, ಕರೆಂಟ್ ಶಾಕ್ ತಗುಲಿ ಸತ್ತಿದ್ದಾಳೆಂದು ಬಿಂಬಿಸಿ ಅಲ್ಲಿಂದ ಪರಾರಿಯಾಗಿದ್ದ. ಮೃತ ರೇಷ್ಠಾಳ 15 ವರ್ಷದ ಪುತ್ರಿ ಮನೆಗೆ ಬಂದು ನೋಡಿದಾಗ ತಾಯಿ ಅಸ್ವಸ್ಥಳಾಗಿ ಶೌಚಾಲಯದಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಮೊದಲು ತಾಯಿಯನ್ನು ನೋಡಿದ್ದ ಮಗಳು ಶೌಚಾಲಯದ ಚಿಲಕ ಹೊರಗಿನಿಂದ ಹಾಕಿದ್ದನ್ನು ಗಮನಿಸಿದ್ದಳು. ಇದರಿಂದ ಅನುಮಾನಗೊಂಡು ಕೂಡಲೇ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ತಕ್ಷಣ ಆರೋಪಿ ಪ್ರಶಾಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಾಯ್ದಿಟ್ಟಿದ್ದಾನೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.