



ಡೈಲಿ ವಾರ್ತೆ: 20/ಅ./2025

ನಿಮ್ಮ ಮಗನನ್ನು ಶಾಲೆ ಬಿಡಿಸಿ ತ್ರಿಶೂಲ ದೀಕ್ಷೆ ಕೊಡಿಸಿ! ಸುನೀಲ್ ಕುಮಾರ್ಗೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: RSS ಕುರಿತಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಶಾಸಕರ ಸುನೀಲ್ ಕುಮಾರ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಒಂದು ದಿನ ಆರ್ ಎಸ್ಎಸ್ ಸಮವಸ್ತ್ರ ತೊಡಿಸಿದರೆ, ನಿಮ್ಮ ಮಗನನ್ನು ಫುಲ್ ಟೈಂ ಕಾರ್ಯಕರ್ತ ಮಾಡಿ, ತ್ರಿಶೂಲ ದೀಕ್ಷೆ ಕೊಡಿಸಿ ಎಂದು ಸುನೀಲ್ ಕುಮಾರ್ಗೆ ಪ್ರಿಯಾಂಕ್ ಸವಾಲು ಹಾಕಿದ್ದಾರೆ.
ಏನಂದಿದ್ದರು ಸುನೀಲ್ ಕುಮಾರ್?
ಸಂಘ,ಸಂಘಸ್ಥಾನ, ಗಣವೇಶ ನಮಗೆ ಪ್ರಚಾರದ ಸರಕಲ್ಲ. ಅದು ಸಂಸ್ಕಾರ. ಅದು ನಮ್ಮ ಶ್ರದ್ಧೆಯ ಭಾಗ. “ಸ್ವಯಂಸೇವಕ”ತ್ವ ನಮಗೆ ಸಂಘ ನೀಡಿದ ನಿರಂತರ ಆಸ್ತಿ. ನನ್ನ ತಂದೆ ದಿ.ವಾಸುದೇವ ಸಂಘದ ಶ್ರದ್ಧೆಯ ಸ್ವಯಂಸೇವಕ. ಅವರೇ ನನ್ನನ್ನು ಸಂಘದ ಮಡಿಲಿಗೆ ಕರೆತಂದಿದ್ದು. ನಾನು ವಾಸುದೇವ ಸುನೀಲ್ ಕುಮಾರ್, ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡಾ ಸಂಘದ ಸ್ವಯಂಸೇವಕ.
ನನ್ನ ಕುಟುಂಬದಂತೆ ಪೀಳಿಗೆಯಿಂದ ಪೀಳಿಗೆಗೆ ಸ್ವಯಂಸೇವಕತ್ವವನ್ನು ಪರಂಪರೆ ಹಾಗೂ ಬಳುವಳಿಯಾಗಿ ಉಳಿಸಿಕೊಂಡು ಬಂದ ಲಕ್ಷಾಂತರ ಕುಟುಂಬಗಳು ಈ ದೇಶದಲ್ಲಿವೆ. ಆದರೆ ನಮಗ್ಯಾರಿಗೂ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ಉದ್ದೇಶ ಇರಲಿಲ್ಲ. ಆದರೆ ಕೆಲವರು ನಿಮ್ಮ ಮಕ್ಕಳನ್ನು ಸಂಘಕ್ಕೆ ಕಳುಹಿಸಿದ್ದೀರಾ? ಎಂದು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿದೆ.
ನಾನು ನನ್ನ ಮಗನನ್ನು ಸ್ವಯಂಸೇವಕನಾಗಿ ಮಾಡುತ್ತೇನೆಯೇ ವಿನಾ ಶಾಸಕನನ್ನಾಗಿಯಲ್ಲ. “ಅಧಿಕಾರ ನನ್ನಪ್ಪನಿಂದ ನನಗೆ, ನನ್ನಿಂದ ನನ್ನ ಮುಂದಿನ ಪೀಳಿಗೆಗೆ” ಎಂದು ಯೋಚಿಸುವ ಕುಟುಂಬ ರಾಜಕಾರಣದ ಪಳೆಯುಳಿಕೆಗಳಿಗೆ ಈ ಪರಂಪರೆ ಅರ್ಥವಾಗುವುದೂ ಇಲ್ಲ.
ಪ್ರಿಯಾಂಕ್ ಖರ್ಗೆ ತಿರುಗೇಟು ಏನು?
ಪುತ್ರನಿಗೆ ಗಣ ವೇಶ ಹಾಕಿಸಿದ ಶಾಸಕ ಸುನಿಲ್ ಕುಮಾರ್ ವಿಚಾರವಾಗಿ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, “ಒಂದು ದಿನ ಗಣ ವೇಷ ಹಾಕಿದರೆ ಅಲ್ಲ. ತ್ರಿಶೂಲ ದೀಕ್ಷೆ ಕೊಡಿಸಿ, ಶಾಲೆ ಕಾಲೇಜು ಬಿಡಿಸಿ ಶಾಖೆಗೆ ಕಳುಹಿಸಿ. ಪೂರ್ಣ ಪ್ರಮಾಣದ ಕಾರ್ಯಕರ್ತ ಮಾಡಿ” ಎಂದು ಸವಾಲು ಹಾಕಿದರು.
ಅವರು ಹೇಳ್ತಾರೆ ಕುಟುಂಬ ರಾಜಕಾರಣ ಅಂತ. ಹಾಗಾದ್ರೆ ಯಡಿಯೂರಪ್ಪ ಕುಟುಂಬ ಏನು. ಇವರಿಗೇ ಸಿಗಬೇಕಿತ್ತಂತೆ ರಾಜ್ಯಾಧ್ಯಕ್ಷ ಸ್ಥಾನ. ಹಾಗಾದ್ರೆ ಯಾಕೆ ತಪ್ಪು? ಅಲ್ಲದೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾಕೆ ರಾಜಿನಾಮೆ ಕೊಟ್ರು. ನನಗೆ ಇಂಟರೆಸ್ಟ್ ಇಲ್ಲ ಅಂತ ಯಾಕೆ ಹೇಳಿದರು ಎಂದು ಪ್ರಶ್ನಿಸಿದ್ದಾರೆ.