ಡೈಲಿ ವಾರ್ತೆ: 07/NOV/2025

ಪಡುಬಿದ್ರೆ: ಯುವ ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಶವ ಶಾಂಭವಿ ನದಿಯಲ್ಲಿ ಪತ್ತೆ!

ಪಡುಬಿದ್ರಿ: ಮಂಗಳೂರಿನ ಹೊರವಲಯದ ವಾಮಂಜೂರಿನ ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (25) ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿವರೆಗೆ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ತಂದೆ ನವೀನ್ ಚಂದ್ರ ಆಳ್ವ ಶೋಧ ಕಾರ್ಯ ನಡೆಸಿ ಪಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶುಕ್ರವಾರ ಬೆಳಿಗ್ಗೆ ಸ್ಥಳೀಯರಾದ ಸಚಿನ್ ನಾಯಕ್ ಎಂಬವರು ಬೋಟ್ ಮೂಲಕ ಶೋಧಕಾರ್ಯ ನಡೆಸುತ್ತಿದ್ದಾಗ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರ ಶಾನುಭಾಗರ ಕುದ್ರುಬಳಿ ಉದ್ಯಮಿ ಅಭಿಷೇಕ್ ಆಳ್ವ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಸ್ಥಳೀಯ ಮುಳುಗು ಪರಿಣತರು, ಈಜುಗಾರರು, ಎನ್‌ಡಿಆರ್‌ಎಫ್ ಸಿಬ್ಬಂದಿ ಸೇರಿ ಶವವನ್ನು ಮೇಲೆತ್ತಿದ್ದಾರೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಬಪ್ಪನಾಡು ಚೆಕ್‌ಪೋಸ್ಟ್ ಬಳಿಯ ಸಿಸಿ ಕ್ಯಾಮೆರಾದಲ್ಲಿ ಮೃತ ಅಬಿಷೇಕ್ ಆಳ್ವರ ಕಾರು ಗುರುವಾರ ಮುಂಜಾನೆ 3.30
ಗಂಟೆಗೆ ಪ್ರಯಾಣಿಸಿದ ಬಗ್ಗೆ ದಾಖಲಾಗಿದೆ.

ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ತಂದೆಯ ಉದ್ಯಮ ನೋಡಿಕೊಳ್ಳುತಿದ್ದರು. ವಾಮಂಜೂರಿನ ತಿರುವೈಲುಗುತ್ತು ಕಂಬಳ ನಡೆಸುತಿದ್ದರು.