ಡೈಲಿ ವಾರ್ತೆ: 04/DEC/2025

ಕೊರೆಯುವ ಚಳಿಯಲ್ಲಿ ಶಿಶುವನ್ನು ಎಸೆದು ಹೋದ ದುರುಳರು – ರಾತ್ರಿಯಿಡೀ ಮಗುವಿಗೆ ಕಾವಲಾದ ಬೀದಿ ನಾಯಿಗಳು!

ಕೋಲ್ಕತಾ: ಎಲ್ಲೆಡೆ ತೀವ್ರ ಚಳಿ ಹೆಚ್ಚುತ್ತಿದ್ದು, ಜನತೆ ಬೆಚ್ಚನೆ ಕಂಬಳಿ ಹೊದ್ದು ಮಲಗುತ್ತಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನದಿಯ ಪಟ್ಟಣದ ಜನರು ಬೆಚ್ಚನೆ ನಿದ್ದೆ ಮಾಡುತ್ತಿರುವಾಗ, ಬೆಳಗಿನ ಜಾವಕ್ಕೆ ಕೆಲವು ಗಂಟೆಗಳ ಮೊದಲು, ರೈಲ್ವೆ ಕಾರ್ಮಿಕರ ವಸಾಹತು ಪ್ರದೇಶದ ಸ್ನಾನಗೃಹದ ಹೊರಗೆ ನವಜಾತ ಶಿಶುವನ್ನು ಏಕಾಂಗಿಯಾಗಿ ಬಿಡಲಾಗಿತ್ತು. ಶಿಶು ಹುಟ್ಟಿ ಕೆಲವೇ ಗಂಟೆಗಳಾಗಿದ್ದಿರಬಹುದು. ದೇಹವು ರಕ್ತದಿಂದ ತುಂಬಿತ್ತು. ಕಂಬಳಿ ಇರಲಿಲ್ಲ. ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದರೆ ಮಗು ಸಂಪೂರ್ಣವಾಗಿ ಒಂಟಿಯಾಗಿರಲಿಲ್ಲ. ಈ ದೃಶ್ಯ ಮಾತ್ರ ನೋಡುಗರನ್ನು ಬೆರಗಾಗಿಸಿತ್ತು.

ಹೌದು, ಜನರು ಪ್ರತಿದಿನ ಓಡಿಸುವ ಬೀದಿನಾಯಿಗಳು ನವಜಾತ ಶಿಶುವಿಗೆ ರಕ್ಷಣೆ ಒದಗಿಸಿತ್ತು. ಬೊಗಳಲಿಲ್ಲ, ಕಚ್ಚಲಿಲ್ಲ, ರಾತ್ರಿಯಿಡೀ ಶಿಶುವಿಗೆ ಕಾವಲು ಕಾಯುತ್ತಿತ್ತು. ರಾತ್ರಿಯಿಡೀ ನಾಯಿಗಳು ಯಾರನ್ನೂ ಹತ್ತಿರ ಬರಲು ಬಿಡಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಬೆಳಗ್ಗೆದ್ದು ನೋಡಿದಾಗ ರೋಮಾಂಚನಕಾರಿಯಾದದ್ದನ್ನು ನೋಡಿದೆವು ಎಂದು ಮಗುವನ್ನು ನೋಡಿದ ಮೊದಲಿಗರಲ್ಲಿ ಒಬ್ಬರಾದ ನಿವಾಸಿ ಸುಕ್ಲಾ ಮಂಡಲ್ ಹೇಳಿದರು. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ ಎಂದು ಅವರು ಹೇಳಿದರು.

ಮತ್ತೊಬ್ಬ ನಿವಾಸಿ ಸುಭಾಷ್ ಪಾಲ್, ಬೆಳಗಿನ ಜಾವ ಸಣ್ಣ ಧ್ವನಿ ಕೇಳಿದ್ದನ್ನು ನೆನಪಿಸಿಕೊಂಡರು. ಹೊರಗೆ ಮಲಗಿದ್ದ ನವಜಾತ ಶಿಶುವಿಗೆ ನಾಯಿಗಳು ಕಾವಲು ಕಾಯುತ್ತಿರುತ್ತವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅವು ಕಾವಲುಗಾರರಂತೆ ವರ್ತಿಸುತ್ತಿತ್ತು ಎಂದು ಅವರು ಹೇಳಿದರು. ಕೊನೆಗೆ ಮಹಿಳೆಯೊಬ್ಬರು ಹತ್ತಿರ ಬಂದಾಗ ಮಾತ್ರ ನಾಯಿಗಳು ಪಕ್ಕಕ್ಕೆ ಸರಿದವು. ಆಕೆ ಮಗುವನ್ನು ತನ್ನ ದುಪ್ಪಟ್ಟಾದಲ್ಲಿ ಸುತ್ತಿ ನೆರೆಹೊರೆಯವರನ್ನು ಸಹಾಯಕ್ಕಾಗಿ ಕರೆದಳು.

ಶಿಶುವನ್ನು ಮೊದಲು ಮಹೇಶ್‌ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವನ್ನು ಪರೀಕ್ಷಿಸಿದ ವೈದ್ಯರು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದರು. ತಲೆಯ ಮೇಲಿದ್ದ ರಕ್ತವು ಜನ್ಮ ಗುರುತುಗಳಿಂದಾಗಿರಬಹುದು. ಹೆರಿಗೆಯಾದ ಕೆಲವೇ ಗಂಟೆಗಳ ನಂತರ ಅಲ್ಲ, ನಿಮಿಷಗಳ ನಂತರ ತ್ಯಜಿಸಲಾಗಿದೆ ಎಂದು ವೈದ್ಯರು ಹೇಳಿದರು.

ಕತ್ತಲು ಇದ್ದಿದ್ದರಿಂದ ಯಾರೋ ಮಗುವನ್ನು ಅಲ್ಲಿ ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ನಬದ್ವೀಪ ಪೊಲೀಸರು ಮತ್ತು ಮಕ್ಕಳ ಸಹಾಯ ಸಂಸ್ಥೆಗಳು ವಿಚಾರಣೆ ಆರಂಭಿಸಿದ್ದು, ಮಗುವಿನ ಆರೈಕೆ ಮಾಡಲಾಗುತ್ತಿದೆ.