
ಡೈಲಿ ವಾರ್ತೆ: 19/DEC/2025
ಭಟ್ಕಳ| ಸಮುದ್ರದಲ್ಲಿ ಈಜಲು ಹೋದ ಇಬ್ಬರು ಸಹೋದರರು ನೀರಲ್ಲಿ ಮುಳುಗಿ ಮೃತ್ಯು

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಂಕಿಯ ಅರೇಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರು ದುರಂತ ಸಾವನ್ನಪ್ಪಿದ್ದಾರೆ.
ಮೃತರನ್ನು ಮದನ್ ನಾರಾಯಣ ಖಾರ್ವಿ (17) ಮತ್ತು ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ.
ಇಬ್ಬರು ಸಹೋದರರು ಸಂಜೆ ಕಬಡ್ಡಿ ಆಟ ಆಡಿದ ನಂತರ ಈಜಲು ಸಮುದ್ರಕ್ಕೆ ಇಳಿದಿದ್ದರು. ಈಜುವಾಗ, ಬಲವಾದ ಸಮುದ್ರದ ಅಲೆಗಳಿಗೆ ಸಿಲುಕಿ ಅವರು ನಾಪತ್ತೆಯಗಿದ್ದರು. ಸ್ಥಳೀಯರು ನಡೆಸಿದ ವ್ಯಾಪಕ ಹುಡುಕಾಟದಿಂದ ಇಬ್ಬರ ಶವಗಳನ್ನು ಹೊರತೆಗೆಯಲಾಯಿತು.
ಯುವ ಸಹೋದರರ ಅಕಾಲಿಕ ಮರಣವು ಮಂಕಿಯಲ್ಲಿ ದುಃಖದ ಛಾಯೆಯನ್ನು ಮೂಡಿಸಿದೆ.
ರಾತ್ರಿ 11.30 ರ ಸುಮಾರಿಗೆ ಸಮುದ್ರದಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮಂಕಿ ಪೊಲೀಸರು ತಿಳಿಸಿದ್ದಾರೆ.
ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.