ಡೈಲಿ ವಾರ್ತೆ: 19/DEC/2025

ವಿದ್ಯುತ್​ ತಂತಿ ಸ್ಪರ್ಶಿಸಿ ಕಾಡುಕೋಣ ಸಾವು

ರಿಪ್ಪನ್​ ಪೇಟೆ: ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಖವಳ್ಳಿಯಲ್ಲಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಕಾಡುಕೋಣವೊಂದು ಅಸಹಜವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಅರಣ್ಯ ಒತ್ತುವರಿ ಜಮೀನಿನಲ್ಲಿ ರೈತರು ತಮ್ಮ ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ಬೇಲಿಗೆ ನೇರವಾಗಿ ವಿದ್ಯುತ್ ಹರಿಸಲಾಗಿದ್ದು, ಮೇವು ಹುಡುಕುತ್ತಾ ಬಂದ ಕಾಡುಕೋಣವು ಬೇಲಿಯನ್ನು ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಸಾಗರ ವಿಭಾಗದ ಡಿಸಿಎಫ್ ಮೋಹನ್ ಕುಮಾರ್ ಹಾಗೂ ಹೊಸನಗರದ ಎಸಿಎಫ್ ಮೋಹನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೆಸ್ಕಾಂ ಎಇ ಅಶ್ವಲ್ ಅವರಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಪಶುವೈದ್ಯಾಧಿಕಾರಿಗಳ ಮೂಲಕ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಾಡುಕೋಣದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.