ಡೈಲಿವಾರ್ತೆ: 16/ಜು./2026

ಬ್ರಹ್ಮಾವರ: ಬೀಟ್ ಪೊಲೀಸ್ ಸಿಬ್ಬಂದಿಗೆ ಜೀವ ಬೆದರಿಕೆ – ಆರೋಪಿ ರೌಡಿ ನಿಖಿಲ್‌ ಬಂಧನ

ಬ್ರಹ್ಮಾವರ: ತಾಲೂಕಿನ ಹಂದಾಡಿ-ಮಟಪಾಡಿ ಗ್ರಾಮದಲ್ಲಿ ಬೀಟ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ರೌಡಿ ನಿಖಿಲ್‌ನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಉಪನಿರೀಕ್ಷಕರ ಸೂಚನೆಯಂತೆ ಹಗಲು ಗ್ರಾಮ ಗಸ್ತು ಕರ್ತವ್ಯದಲ್ಲಿದ್ದ ಬ್ರಹ್ಮಾವರ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್ ಕಿಶನ್ ಅವರು ಸಂಜೆ 7 ಗಂಟೆ ಸುಮಾರಿಗೆ ರೌಡಿ ನಿಖಿಲ್‌ನನ್ನು ಪರಿಶೀಲಿಸಲು ಆತನ ಮನೆಗೆ ತೆರಳಿದ್ದರು. ಮನೆ ಬಳಿ ನಿಖಿಲ್ ಕಾಣಿಸದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ, “ನಾನು ಎಲ್ಲಿದ್ದರೂ ನಿನಗೆ ಯಾಕೆ? ನನ್ನ ಮನೆಗೆ ಯಾಕೆ ಬಂದಿದ್ದೀಯ? ಅಲ್ಲೇ ಇರು, ಬಂದು ನಿನ್ನನ್ನು ಕೊಂದು ಹಾಕುತ್ತೇನೆ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ರಾತ್ರಿ 8.30ರ ಸುಮಾರಿಗೆ ಕಾನ್ಸ್‌ಟೇಬಲ್ ವಿಶ್ರಾಂತಿಯಲ್ಲಿದ್ದ ವೇಳೆ ನಿಖಿಲ್ ಪದೇ ಪದೇ ಕರೆ ಮಾಡಿ, “ನೀನು ಯಾಕೆ ನನ್ನ ಮನೆ ಹತ್ತಿರ ಬಂದಿದ್ದೀಯ? ಈಗ ಬಾ” ಎಂದು ಅವಾಚ್ಯವಾಗಿ ನಿಂದಿಸಿ ಮತ್ತೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಮೂಲಕ ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ನಿಖಿಲ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಕಲಂ 132, 351(2) ಹಾಗೂ 352ರಡಿ ಪ್ರಕರಣ ದಾಖಲಾಗಿದೆ.

ಬಂಧಿತ ನಿಖಿಲ್ (ತಂದೆ: ಕೃಷ್ಣ), ಬೇಳೂರು ಜೆಡ್ಡು, ಹಂದಾಡಿ ಗ್ರಾಮದ ನಿವಾಸಿಯಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಪೊಲೀಸರ ಮಾಹಿತಿ ಪ್ರಕಾರ, ನಿಖಿಲ್ ವಿರುದ್ಧ ಈ ಹಿಂದೆಯೇ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ಹಾಗೂ ಒಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.