
ಡೈಲಿ ವಾರ್ತೆ:ಜನವರಿ/28/2026
ಶಿವಮೊಗ್ಗದಲ್ಲಿ ಧಗಧಗನೆ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್ – 40 ಪ್ರಯಾಣಿಕರು ಅಪಾಯದಿಂದ ಪಾರು

ಶಿವಮೊಗ್ಗ: ಖಾಸಗಿ ಸ್ಲೀಪರ್ ಬಸ್ವೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿ ಧಗಧಗನೆ ಉರಿದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು–ಸೂಡೂರು ಗೇಟ್ ಸಮೀಪ ಸಂಭವಿಸಿದೆ.
ಅದೃಷ್ಟವಶಾತ್ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ಗೆ ಸೇರಿದ ಈ ಖಾಸಗಿ ಸ್ಲೀಪರ್ ಬಸ್ ಹೊಸನಗರ ತಾಲೂಕಿನ ನಿಟ್ಟೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ನಿಟ್ಟೂರಿನಿಂದ ಅರಸಾಳು ಕಡೆ ಸಾಗುತ್ತಿದ್ದ ವೇಳೆ ಬಸ್ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಕಾಣುತ್ತಿದ್ದಂತೆಯೇ ಚಾಲಕ ತಕ್ಷಣ ಎಚ್ಚೆತ್ತುಕೊಂಡು ಬಸ್ ಅನ್ನು ರಸ್ತೆ ಬದಿಗೆ ತಿರುಗಿಸಿದ್ದು, ಈ ವೇಳೆ ರಸ್ತೆ ಪಕ್ಕದ ಮರಕ್ಕೆ ಬಸ್ ಡಿಕ್ಕಿಯಾಗಿದೆ. ತುರ್ತು ನಿರ್ಗಮನ ದ್ವಾರ, ಡೋರ್ ಹಾಗೂ ಕಿಟಕಿಗಳ ಮೂಲಕ ಪ್ರಯಾಣಿಕರು ತಕ್ಷಣವೇ ಬಸ್ನಿಂದ ಹೊರಬಂದಿದ್ದಾರೆ.
ಘಟನೆಯಲ್ಲಿ ಬಸ್ ಚಾಲಕ ಹಾಗೂ ಕ್ಲೀನರ್ಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಬಸ್ನಿಂದ ಹೊರಬರುವ ವೇಳೆ 5 – 6 ಪ್ರಯಾಣಿಕರಿಗೂ ಸಣ್ಣ ಗಾಯಗಳಾಗಿವೆ.
ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದ ಕೂಡಲೇ ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.