

ಡೈಲಿ ವಾರ್ತೆ: ಮಾ./02/2026

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ: ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್ ಸೂಚನೆ

ಮಂಗಳೂರು: ಕೋಮು ಸೌಹಾರ್ದತೆಯ ಕೇಂದ್ರಬಿಂದುವಾಗಿರುವ ಉಳ್ಳಾಲದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಸಮರ ಸಾರುವಂತೆ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.
ಉಳ್ಳಾಲದ ಪ್ರಸಿದ್ಧ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಸಮಾಜದ ಶಾಂತಿ ಕದಡುವ ಇಂತಹ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರೊಂದಿಗೆ ತುರ್ತು ಮಾತುಕತೆ ನಡೆಸಿದ ಸಭಾಧ್ಯಕ್ಷರು, ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಸೂಚಿಸಿದ್ದಾರೆ. “ಉಳ್ಳಾಲದಲ್ಲಿ ದಶಕಗಳಿಂದಲೂ ಸರ್ವ ಧರ್ಮೀಯರು ಅಣ್ಣ-ತಮ್ಮಂದಿರಂತೆ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಂತಹ ಪವಿತ್ರ ನೆಲದಲ್ಲಿ ವಿಷಬೀಜ ಬಿತ್ತಲು ಯತ್ನಿಸುವವರ ಹುನ್ನಾರವನ್ನು ಪೊಲೀಸ್ ಇಲಾಖೆ ಮೊಳಕೆಯಲ್ಲೇ ಚಿವುಕಬೇಕು,” ಎಂದು ಅವರು ಎಚ್ಚರಿಸಿದ್ದಾರೆ.
ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಯತ್ನ:
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಲ್ಲಿ ಭಯ ಭೀತಿ ಹುಟ್ಟಿಸುವ ಪೋಸ್ಟ್ ಹಾಕುವ ಮೂಲಕ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಸಂಚು ರೂಪಿಸಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದ ಮೂಲಕ ತನಿಖೆ ತೀವ್ರಗೊಳಿಸಿ, ಇಂತಹ ಪ್ರಚೋದನಾಕಾರಿ ಸಂದೇಶಗಳ ಹಿಂದೆ ಇರುವ ಶಕ್ತಿಗಳನ್ನು ಬಯಲಿಗೆಳೆಯಲು ಕಮಿಷನರ್ ಅವರಿಗೆ ಸೂಚಿಸಲಾಗಿದೆ.