

ಡೈಲಿ ವಾರ್ತೆ: ಮಾ./06/2026

ಕುರಿ ಶೆಡ್ಗೆ ಆಕಸ್ಮಿಕ ಬೆಂಕಿ; 700 ಕುರಿಗಳು ಜೀವಂತ ದಹನ, 2 ಕೋಟಿ ಹಾನಿ

ಸಿಂಧನೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 700ಕ್ಕೂ ಹೆಚ್ಚು ಕುರಿಗಳು ಜೀವಂತವಾಗಿ ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮುಕ್ಕುಂದ ಗ್ರಾಮದ ನಿವಾಸಿ ಹೇಮಲತಾ ಮಧುಸೂದನ್ ಎಂಬುವವರು ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಕುರಿ ಶೆಡ್ ನಿರ್ಮಿಸಿದ್ದರು. ಕಳೆದ ಮೂರು ವರ್ಷಗಳಿಂದ ಇಲ್ಲಿ ಕುರಿ ಸಾಕಾಣಿಕೆ ಮಾಡಲಾಗುತ್ತಿತ್ತು. ನಿನ್ನೆ ರಾತ್ರಿ ಸುಮಾರು 2:30ರ ಸಮಯದಲ್ಲಿ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ಈ ವೇಳೆ ಶೆಡ್ನಲ್ಲಿದ್ದ 6 ಮಂದಿ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದ ಕಾರಣ, ಬೆಂಕಿ ವ್ಯಾಪಿಸಿದ ನಂತರವಷ್ಟೇ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ, ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಇಡೀ ಶೆಡ್ ಆಹುತಿಯಾಗಿತ್ತು.
ಸುಟ್ಟು ಹೋದ 700 ಕುರಿಗಳ ಪೈಕಿ 100ಕ್ಕೂ ಹೆಚ್ಚು ಕುರಿಗಳು ಸದ್ಯದಲ್ಲೇ ಮರಿ ಹಾಕುವ ಹಂತದಲ್ಲಿದ್ದವು. ಗರ್ಭದಲ್ಲಿದ್ದ ಮರಿಗಳೂ ಸಹ ತಾಯಿಯ ಜೊತೆಗೇ ಬೆಂಕಿಗೆ ಬಲಿಯಾಗಿರುವುದು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿದೆ. ಸುಮಾರು 4 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಈ ಶೆಡ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ 47 ಲಕ್ಷ ರೂ. ಸಬ್ಸಿಡಿ ಪಡೆದಿದ್ದ ಹೇಮಲತಾ ಅವರು, ಉಳಿದ ಹಣವನ್ನು ಸಾಲದ ಮೂಲಕ ಹೊಂದಿಸಿದ್ದರು.
”ಸುಮಾರು 2 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. 525 ಕುರಿಗಳಿಗೆ ಮಾತ್ರ ವಿಮೆ ಸೌಲಭ್ಯವಿದ್ದು, ಸರ್ಕಾರ ತಕ್ಷಣವೇ ಸ್ಪಂದಿಸಿ ನಮಗೆ ಸೂಕ್ತ ಪರಿಹಾರ ನೀಡಬೇಕು,” ಎಂದು ಮಾಲೀಕರ ಸಂಬಂಧಿ ಪದ್ಮಾನಾಯ್ಡು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ತಗುಲಲು ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.