ಡೈಲಿವಾರ್ತೆ:23/ಮಾರ್ಚ್/2026

ನಕಲಿ ಬಂಗಾರ ನೀಡಿ ವಂಚನೆ: ಪಡುಬಿದ್ರಿ ಪೊಲೀಸರಿಂದ ಆರೋಪಿ ಮಹಿಳೆಯ ಬಂಧನ, ಮತ್ತೊಬ್ಬ ಆರೋಪಿಗಾಗಿ ಶೋಧ

​ಪಡುಬಿದ್ರಿ: ನಕಲಿ ಬಂಗಾರದ ಸರವನ್ನು ಅಸಲಿ ಎಂದು ನಂಬಿಸಿ ವೃದ್ಧ ಮಹಿಳೆಯೊಬ್ಬರಿಂದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣವನ್ನು ಭೇದಿಸಿರುವ ಪಡುಬಿದ್ರಿ ಪೊಲೀಸರು, ಓರ್ವ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನಲೆ:
​ಕಾಪು ತಾಲೂಕಿನ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪರಿಚಿತ ಮಹಿಳೆ ಮತ್ತು ಪುರುಷರ ತಂಡವೊಂದು ಬಸ್ಸಮ್ಮ ಅವರನ್ನು ಸಂಪರ್ಕಿಸಿ, ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ. ತಮ್ಮ ಬಳಿ ಆರು ಪವನ್ ತೂಕದ ಚಿನ್ನದ ಸರವಿದ್ದು, ತುರ್ತು ಹಣದ ಅವಶ್ಯಕತೆ ಇರುವುದರಿಂದ ಅದನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದಾರೆ.

​ವಂಚಕರ ಮಾತು ನಂಬಿದ ಬಸ್ಸಮ್ಮ ಅವರು, ತನ್ನ ಬಳಿಯಿದ್ದ ಸುಮಾರು 2 ಪವನ್ ತೂಕದ (ಅಂದಾಜು ₹1.50 ಲಕ್ಷ ಮೌಲ್ಯದ) ಚಿನ್ನಾಭರಣ ಮತ್ತು ₹6,000 ನಗದು ಹಣವನ್ನು ನೀಡಿ ಆ ಸರವನ್ನು ಪಡೆದುಕೊಂಡಿದ್ದಾರೆ.

ಆರೋಪಿಗಳು ತೆರಳಿದ ನಂತರ ಅನುಮಾನಗೊಂಡ ಬಸ್ಸಮ್ಮ ಅವರು, ತಮಗೆ ನೀಡಲಾದ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಆ ಸರವು ಕೇವಲ ನಕಲಿ ಎಂಬುದು ದೃಢಪಟ್ಟಿದೆ. ಕೂಡಲೇ ಸ್ಥಳಕ್ಕೆ ಮರಳಿದಾಗ ವಂಚಕರು ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಸಂತ್ರಸ್ತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


​ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ವಂಚನೆಯ ಜಾಲ ಪತ್ತೆಯಾಗಿದೆ. ಬಂಧಿತ ಆರೋಪಿಯನ್ನು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ ಎಂದು ಗುರುತಿಸಲಾಗಿದೆ. ಬಂಧಿತಳಿಂದ ₹75,000 ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ ₹6,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ವೆಂಕಟೇಶ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.