ಡೈಲಿವಾರ್ತೆ:30/ಮಾರ್ಚ್/2026

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ; ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ಸಂಯೋಜಕ ಎಸ್. ಸಂಗಮೇಶ್

ಬೆಂಗಳೂರು: ಒಳಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಸೂಕ್ತ ಹೋರಾಟ ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹ ತೀರ್ಮಾನಿಸಿದೆ.

ಈ ಕುರಿತು ಬೆಂಗಳೂರಿನ ವಸಂತನಗರದಲ್ಲಿರುವ ಲಿಡ್ಕರ್ ಭವನದಲ್ಲಿ, ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ಸಂಯೋಜಕ ಎಸ್. ಸಂಗಮೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ 150ಕ್ಕೂ ಅಧಿಕ ಯುವ ಮುಖಂಡರು ಭಾಗವಹಿಸಿ, ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಮುಂದಿನ ಹೋರಾಟದ ದಿಕ್ಕು, ಕಾರ್ಯಯೋಜನೆ ಹಾಗೂ ರಾಜ್ಯದ ಮಾದಿಗ ಯುವಕರ ಮುಂದಿನ ಹೆಜ್ಜೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

ಒಳಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳದೇ ವಿಳಂಬ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಪಚುನಾವಣೆಗೆ ಎರಡು ತಂಡ ಮಾಡಿ ಚಲೋ ದಾವಣಗೆರೆ ಚಲೋ ಬಾಗಲಕೋಟ ಎಂಬ ಘೋಷಣೆಯೊಂದಿಗೆ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪ ಚುನಾವಣಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಯುವ ಸಮೂಹ ಸಂಕಲ್ಪ ವ್ಯಕ್ತಪಡಿಸಿದೆ.

ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಯುವಕರು ಅಮೂಲ್ಯ ಸಲಹೆ–ಸೂಚನೆಗಳನ್ನು ನೀಡಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಯುವ ಸಮೂಹದ ಪದಾಧಿಕಾರಿಗಳಾದ ಹನುಮೇಶ್ ಗುಂಡೂರ, ಮಲ್ಲಿಕಾರ್ಜುನ ಬಾಂಬೇಕರ, , ಡಾ. ನಾಗೇಶ್ ಕೆ.ಎನ್, ಮುರಳಿಧರ ಮೇಲಿನಮನಿ, ರವಿಕುಮಾರ್ ಮರಡಿಪುರ, ಏಳುಕೋಟೆಪ್ಪ ಪಾಟೀಲ ಪ್ರತಾಪ್ (ಬೆಂಗಳೂರು), ನಿಂಗರಾಜ ಗುಳೆ
ಯಲ್ಲು ಜಡರಾಮಕುಂಟಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.