ಡೈಲಿವಾರ್ತೆ:23/ಏಪ್ರಿಲ್ /2026

ಕುಂದಾಪುರ: ಮಧ್ಯರಾತ್ರಿ ಯುವಕರ ಅಟ್ಟಹಾಸ – ಬೀದಿ ಜಗಳಕ್ಕೆ ಪೊಲೀಸ್ ದಾಳಿ, ಇಬ್ಬರ ಬಂಧನ, 7 ಮಂದಿ ಪರಾರಿ

ಕುಂದಾಪುರ: ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ ಶಾಂತಿ ಭಂಗಕ್ಕೆ ಕಾರಣವಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಸುಮಾರು 11:30 ಗಂಟೆಗೆ ಪೊಲೀಸ್ ಉಪನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್ ಅವರು ರಾತ್ರಿ ಪಾಳಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಹಟ್ಟಿಯಂಗಡಿ ಗ್ರಾಮದ ಮಾರಲಾ ದೇವಿ ದೇವಸ್ಥಾನದ ಬಸ್ ಸ್ಟ್ಯಾಂಡ್ ಬಳಿ ಕೆಲ ಯುವಕರು ಏರುದನಿಯಲ್ಲಿ ಮಾತನಾಡುತ್ತ ಪರಸ್ಪರ ಕೈಕೈಮಿಲಾಯಿಸುತ್ತ ಜಗಳವಾಡುತ್ತಿರುವುದು ಗಮನಕ್ಕೆ ಬಂದಿದೆ.

ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಒಟ್ಟು ಏಳು ಮಂದಿ ಯುವಕರು ಅಲ್ಲಿಂದ ಓಡಿ ಹೋಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಬಂಧಿತರನ್ನು ಪ್ರಜ್ವಲ್ (19) ಹಾಗೂ ಅಭಿಷೇಕ (24) ಎಂದು ಗುರುತಿಸಲಾಗಿದ್ದು, ಇವರು ಹಟ್ಟಿಯಂಗಡಿ ಗ್ರಾಮದ ಗೋಳಿಕೆರೆ ನಿವಾಸಿಗಳಾಗಿದ್ದಾರೆ.

ಪರಾರಿಯಾದವರನ್ನು ರೋಹಿತ್, ಕಾರ್ತಿಕ್, ಸಾತ್ವಿಕ್ (ಕೊಟೇಶ್ವರ ನಿವಾಸಿಗಳು) ಹಾಗೂ ಶಶಾಂಕ್, ದಿಲೀಪ್, ಸಮರ್ಥ, ಸೃಜನ್ (ಬಸ್ರೂರು ಗ್ರಾಮದ ಹಟ್ಟಿಕುದ್ರು ನಿವಾಸಿಗಳು) ಎಂದು ಗುರುತಿಸಲಾಗಿದೆ. ಆರೋಪಿತರು ಪರಸ್ಪರ ಮಾತಿಗೆ ಮಾತು ಬೆಳೆಸಿ ಜಗಳವಾಡಿ ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡಿರುವ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2026 ಅಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 194(2) ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.