ಡೈಲಿವಾರ್ತೆ: 03/ಮೇ/2026

ನವದೆಹಲಿ ಭೀಕರ ಅಗ್ನಿ ದುರಂತ: ಎಸಿ ಸ್ಫೋಟಕ್ಕೆ 9 ಮಂದಿ ಬಲಿ – ಒಂದೇ ಕುಟುಂಬದ ಐವರು ಸಾವು

​ನವದೆಹಲಿ: ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೂವರೆ ವರ್ಷದ ಹಸುಗೂಸು ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಜೀವ ದಹನವಾಗಿರುವ ಹತಭಾಗ್ಯ ಘಟನೆ ನಡೆದಿದೆ.

ವಸತಿ ಸಂಕೀರ್ಣವೊಂದರಲ್ಲಿ ಸಂಭವಿಸಿದ ಈ ದುರಂತ ಇಡೀ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

​ದುರಂತದ ವಿವರ:
​ಮೇ 3ರ ರವಿವಾರ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ನಾಲ್ಕು ಅಂತಸ್ತಿನ ವಸತಿ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಏರ್ ಕಂಡಿಷನರ್ (ಎಸಿ) ಸ್ಫೋಟಗೊಂಡಿದ್ದೇ ಈ ಭೀಕರ ಅಗ್ನಿ ದುರಂತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲಿ ಮೂರು ಮತ್ತು ನಾಲ್ಕನೇ ಅಂತಸ್ತಿಗೆ ವ್ಯಾಪಿಸಿದ್ದು, ಗಾಢ ನಿದ್ರೆಯಲ್ಲಿದ್ದ ನಿವಾಸಿಗಳು ಹೊರಬರಲಾಗದೆ ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದಾರೆ.

​ಬಲಿಯಾದವರ ವಿವರ:
​ಮೃತಪಟ್ಟ ಒಂಬತ್ತು ಜನರ ಗುರುತು ಪತ್ತೆಯಾಗಿದ್ದು, ಎರಡನೇ ಅಂತಸ್ತಿನಲ್ಲಿ ವಾಸವಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವುದು ಅತ್ಯಂತ ಕರುಣಾಜನಕವಾಗಿದೆ.
​ಒಂದೇ ಕುಟುಂಬದ ಐವರು: ಅರವಿಂದ್ ಜೈನ್ (60), ಪತ್ನಿ ಅನಿತಾ ಜೈನ್ (58), ಪುತ್ರ ನಿಶಾಂತ್ (35), ಸೊಸೆ ಆಂಚಲ್ (33) ಮತ್ತು ಒಂದೂವರೆ ವರ್ಷದ ಪುಟ್ಟ ಮಗು ಆಕಾಶ್.
​ಮೂರನೇ ಅಂತಸ್ತಿನ ನಿವಾಸಿಗಳು: ನಿತಿನ್ ಜೈನ್ (50), ಪತ್ನಿ ಶೈಲಿ (48) ಮತ್ತು ಮಗ ಸಮ್ಯಕ್ (25).
​ಮೊದಲ ಅಂತಸ್ತು: ಶಿಖಾ ಜೈನ್ (40) ಮೃತಪಟ್ಟಿದ್ದು, ಅವರ ಪತಿ ನವೀನ್ ಜೈನ್ ತೀವ್ರವಾಗಿ ಗಾಯಗೊಂಡಿದ್ದಾರೆ.

​ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ 14 ವಾಹನಗಳು ಧಾವಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು. ಈ ವೇಳೆ ಕಟ್ಟಡದಲ್ಲಿದ್ದ 12ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಕಟ್ಟಡದ ಮೇಲ್ಬಾಗದಿಂದ ದಟ್ಟವಾದ ಹೊಗೆ ಮತ್ತು ಬೆಂಕಿಯ ಕೆನ್ನಾಲಗೆಗಳು ಬರುತ್ತಿದ್ದ ದೃಶ್ಯ ಎದೆಝಲ್ಲೆನಿಸುವಂತಿತ್ತು. ಪ್ರಾಣ ಉಳಿಸಿಕೊಳ್ಳಲು ಜನರು ನಡೆಸುತ್ತಿದ್ದ ಚೀರಾಟ ಮನಕಲಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.

​ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಅಥವಾ ಎಸಿ ಸ್ಫೋಟದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.