ಡೈಲಿವಾರ್ತೆ: 08/ಮೇ/2026

ಸಾಸ್ತಾನ: ​ಈಜು ತರಬೇತುದಾರನಿಗೆ ಲಕ್ಷಾಂತರ ರೂಪಾಯಿ ವಂಚನೆ – ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

​ಕೋಟ: ವ್ಯವಹಾರದ ಹೆಸರಿನಲ್ಲಿ ಹಣ ಪಡೆದು ನಂಬಿಕೆ ದ್ರೋಹ ಎಸಗಿದ್ದಲ್ಲದೆ, ಬಾಕಿ ಹಣ ಕೇಳಿದ ವ್ಯಕ್ತಿಗೆ ಜೀವಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.​

ಪ್ರಕರಣದ ಹಿನ್ನೆಲೆ: ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ನಿವಾಸಿ, ಈಜು ತರಬೇತುದಾರರಾದ ಗೋಪಾಲ ಖಾರ್ವಿ (50) ಅವರು ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ದೂರುದಾರರ ಸಂಬಂಧಿಕರಾದ ರವೀಂದ್ರ ಖಾರ್ವಿ ಹಾಗೂ ಪ್ರೀತು ರವೀಂದ್ರ ಖಾರ್ವಿ ಎಂಬುವವರು ವ್ಯವಹಾರದ ನೆಪದಲ್ಲಿ ಗೋಪಾಲ ಖಾರ್ವಿ ಅವರಿಂದ ಒಟ್ಟು 9,50,000/- ರೂ. ಹಣವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.ಪಡೆದ ಹಣದ ಪೈಕಿ ಆರೋಪಿಗಳು ಇದುವರೆಗೆ ಕೇವಲ 6,27,000/- ರೂಪಾಯಿಗಳನ್ನು ಮಾತ್ರ ಮರಳಿಸಿದ್ದು, ಉಳಿದ 3,23,000/- ರೂಪಾಯಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಆರೋಪಿಗಳು ಹಣ ನೀಡದೆ ಇವತ್ತು, ನಾಳೆ ಎಂದು ಕಾಲಹರಣ ಮಾಡಿದ್ದಲ್ಲದೆ, ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆರೋಪಿಗಳು ಉದ್ದೇಶಪೂರ್ವಕವಾಗಿಯೇ ತಮಗೆ ಮೋಸ ಮಾಡುವ ಮತ್ತು ನಷ್ಟ ಉಂಟುಮಾಡುವ ಇರಾದೆ ಹೊಂದಿದ್ದಾರೆಂದು ಗೋಪಾಲ ಖಾರ್ವಿ ಅವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಕೋಟ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.ಆರೋಪಿಗಳ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಯ ಈ ಕೆಳಗಿನ ಕಲಂ 316(2),318(4),351,352 ಹಾಗೂ 190ರ ಅನ್ವಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.​