ಡೈಲಿವಾರ್ತೆ:17/ಸೆ./2026

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ : ಕರವೇ ಜಿಲ್ಲಾಧ್ಯಕ್ಷ ಅ. ರಾ ಪ್ರಭಾಕರ್ ಪೂಜಾರಿ

ಉಡುಪಿ : ನಾಳೆ ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಯುತ್ತಿದೆ. ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು ಘೋಷಿಸಬೇಕು ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಅ. ರಾ ಪ್ರಭಾಕರ ಪೂಜಾರಿ ಒತ್ತಾಯಿಸಿದ್ದಾರೆ.

ಕನ್ನಡದ ಸೋದರ ನುಡಿಯಾದ ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಅನೇಕ ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಸಾವಿರಾರು ವರ್ಷಗಳಿಂದ ಕನ್ನಡ ಮತ್ತು ತುಳು ನುಡಿಗಳು ಕರಾವಳಿ ಕರ್ನಾಟಕದ ನೆಲದಲ್ಲಿ ಜೊತೆಯಾಗಿ ಬೆಳೆದಿವೆ. ಎರಡೂ ನುಡಿಗಳ ನಡುವೆ ಇರುವ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸಂಬಂಧ ಅತ್ಯಂತ ಗಾಢವಾದದ್ದು. ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಗೆ ತುಳುವರ ಕೊಡುಗೆ ಅಪಾರ.

ಕರಾವಳಿ ಕರ್ನಾಟಕದ ಜನಜೀವನದಲ್ಲಿ ತುಳು ನುಡಿ ಆಳವಾಗಿ ಬೇರೂರಿದೆ. ತುಳು ಕೇವಲ ಸಂವಹನದ ನುಡಿಯಲ್ಲ. ಅದು ಆ ಭಾಗದ ಜನರ ಬದುಕು, ಸಂಸ್ಕೃತಿ, ಜನಪದ, ಕಲೆ, ಸಾಹಿತ್ಯ, ಆಚರಣೆ, ನಂಬಿಕೆ ಮತ್ತು ಇತಿಹಾಸದ ಜೀವಂತ ಅಭಿವ್ಯಕ್ತಿಯಾಗಿ ಬೆಳೆದು ನಿಂತಿದೆ. ಯಕ್ಷಗಾನ, ದೈವಾರಾಧನೆ ಸೇರಿದಂತೆ ಕರಾವಳಿಯ ಅನೇಕ ಕಲಾ ಪರಂಪರೆಗಳೊಂದಿಗೆ ತುಳು ನುಡಿಯ ಸಂಬಂಧವಿದೆ. ಹೀಗಾಗಿ ತುಳು ನುಡಿಯನ್ನು ಉಳಿಸುವುದು ಮತ್ತು ಬೆಳೆಸುವುದೆಂದರೆ, ಅದರೊಂದಿಗೆ ಬೆಸೆದುಕೊಂಡಿರುವ ಅಪಾರ ಸಾಂಸ್ಕೃತಿಕ ಪರಂಪರೆಯ ಉಳಿಸುವುದೂ ಆಗಿದೆ.

ಈ ಹಿನ್ನೆಲೆಯಲ್ಲಿ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ಕುರಿತು ಕರ್ನಾಟಕ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಜನರು ತಮ್ಮ ತಾಯಿನುಡಿಯಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಇಂತಹ ಮಾನ್ಯತೆ ಸಹಕಾರಿಯಾಗಬಹುದು.

ಅಷ್ಟೇ ಅಲ್ಲ, ತುಳು ನುಡಿಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ನೀಡಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. ಇದು ನಮ್ಮ ಹೊಸ ಬೇಡಿಕೆಯೇನಲ್ಲ. ಕರವೇ ಮೊದಲಿನಿಂದಲೂ ಈ ಹಕ್ಕೊತ್ತಾಯವನ್ನು ಬೆಂಬಲಿಸುತ್ತಾ ಬಂದಿದೆ.

ಸಂವಿಧಾನದ 8ನೇ ಅನುಸೂಚಿಯಲ್ಲಿ ಪ್ರಸ್ತುತ 22 ನುಡಿಗಳಿವೆ. ತುಳು ಮತ್ತು ಕೊಡವ ಸೇರಿದಂತೆ ಇನ್ನೂ ಹಲವು ನುಡಿಗಳನ್ನು 8ನೇ ಅನುಸೂಚಿಗೆ ಸೇರಿಸಬೇಕೆಂಬ ಬೇಡಿಕೆಗಳು ಕೇಂದ್ರ ಸರ್ಕಾರದ ಮುಂದೆ ಹಲವು ವರ್ಷಗಳಿಂದ ಇದ್ದು, ನೆನೆಗುದಿಗೆ ಬಿದ್ದಿವೆ. 2003ರಲ್ಲಿ ಸೀತಾಕಾಂತ ಮೊಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ 8ನೇ ಅನುಸೂಚಿಗೆ ಹೆಚ್ಚಿನ ಭಾಷೆಗಳನ್ನು ಸೇರಿಸುವ ಕುರಿತು ಮಾನದಂಡಗಳನ್ನು ರೂಪಿಸಲು ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ 2004ರಲ್ಲಿ ವರದಿ ಸಲ್ಲಿಸಿತು. ಕರ್ನಾಟಕ ಸರ್ಕಾರವೇ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೂ ಇದುವರೆಗೆ ಈ ನ್ಯಾಯಯುತ ಬೇಡಿಕೆ ಈಡೇರಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ‘ವಿವಿಧತೆಯಲ್ಲಿ ಏಕತೆ’ಯನ್ನು ಪ್ರತಿಪಾದಿಸುತ್ತ ಬಂದಿದೆ. ಬಹುತ್ವವನ್ನು ಗೌರವಿಸದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯನ್ನು ನಾವು ಯಾವ ಕಾರಣಕ್ಕೆ ವಿರೋಧಿಸುತ್ತೇವೆಯೋ, ಅದೇ ಕಾರಣಕ್ಕೆ ತುಳು, ಕೊಡವದಂಥ ಸೋದರ ನುಡಿಗಳಿಗೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ.