ಡೈಲಿ ವಾರ್ತೆ : 31 ಮೇ 2022

ಕುಂದಾಪುರ: ತಲ್ಲೂರು ಗ್ರಾಪಂ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಡಿವೈಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ಪೊಲೀಸರ ತಂಡ ಬಂಧಿಸಿರುವುದಾಗಿ ವರದಿಯಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಝೀಝ್(32), ಆತನಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಆತನ ಸಹೋದರ ರಹೀಮ್ (34) ನನ್ನು ಬಂಧಿಸಿದ್ದಾರೆ.

ನ್ಯಾಯಾಲಯವು ಪ್ರಮುಖ ಆರೋಪಿ ಅಝೀಝ್ ಗೆ
ಜೂ.6ರವರೆಗೆ ಪೊಲೀಸ್ ಕಸ್ಟಡಿ ಹಾಗೂ ಆರೋಪಿ ರಹೀಮ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

ತಲ್ಲೂರಿನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ, ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದ್ದರು.

ಶಿಲ್ಪಾರ ಆತ್ಮಹತ್ಯೆಗೆ ಅಝೀಝ್ ಹಾಗೂ ಆತನ ಪತ್ನಿ ಸಲ್ಮಾ ಪ್ರಚೋದನೆಯೇ ಕಾರಣ ಎಂದು ಮೃತರ ಸಹೋದರ ನೀಡಿದ ದೂರನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.