ಡೈಲಿ ವಾರ್ತೆ: 05/ಮೇ /2024

ಆಗುಂಬೆ ಘಾಟ್: ರಸ್ತೆಯ ತಡೆಗೋಡೆಯ ಬಳಿ ಬಿರುಕು- ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ!

ಹೆಬ್ರಿ: ಕರಾವಳಿ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆಯ ಬಳಿ ಬಿರುಕು ಕಂಡಿದ್ದು ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್‌ ಆಗುವ ಭೀತಿ ಎದುರಾಗಿದೆ.

ಘಾಟಿಯ 14 ನೇ ತಿರುವಿನ ಬಳಿ ವಾಹನವು ಎಡ ಬದಿಯಲ್ಲಿ ಚಲಿಸಿದರೆ ತಡೆಗೋಡೆ ಸಂಪೂರ್ಣವಾಗಿ ಕುಸಿಯುವ ಎಲ್ಲಾ ಸಾಧ್ಯತೆಗಳಿವೆ. ಇನ್ನೂ  ಭಾರೀ ಗಾತ್ರದ ವಾಹನಗಳು ಘಾಟಿಗೆ ಪ್ರವೇಶಿಸುತ್ತಿವೆ. ಹಿಂದಿನ ಸಂದರ್ಭಗಳಲ್ಲಿ ಅನೇಕ ಭಾರೀ ಗಾತ್ರದ ವಾಹನಗಳು ತಡೆಗೋಡೆಗಳಿಗೆ ಢಿಕ್ಕಿ ಹೊಡೆದು ಅದಕ್ಕೆ ಹಾನಿಯಾಗಿದ್ದವು.

ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಘಾಟಿ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚು. ತಡೆಗೋಡೆಯ ಬಿರುಕು ತಕ್ಷಣ ದುರಸ್ತಿ ಪಡಿಸದಿದ್ದರೆ ಮಳೆಗಾಲದಲ್ಲಿ ಗೋಡೆ ಕುಸಿಯುವ ಸಾಧ್ಯತೆಯಿದೆ. ಪ್ರತಿ ವರ್ಷ ಘಾಟಿ ಭಾಗದ ಕೆಲವು ಭಾಗಗಳು ಕುಸಿದು ಬೀಳುತ್ತಿದ್ದು, ಅವುಗಳನ್ನು ದುರಸ್ತಿ ಮಾಡುತ್ತಿಲ್ಲ. ಇದು ಕೂಡ ಬಹುತೇಕ ಘಾಟ್ ವಿಭಾಗ ದುರ್ಬಲವಾಗಲು ಕಾರಣವಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಈ ಜನರಿಗೆ ಆಗುಂಬೆ ಘಾಟಿ ಬಹಳ ಮುಖ್ಯವಾಗಿದೆ. ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಬಿರುಕು ಬಿಟ್ಟಿರುವುದನ್ನು ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜೊತೆಗೆ ಘಾಟಿಯ ಎರಡೂ ಬದಿಯಲ್ಲಿ ಬೃಹತ್ ಮರಗಳಿದ್ದು, ಕೊಂಬೆಗಳು ರಸ್ತೆಗೆ ಬಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ಇವುಗಳನ್ನೂ ಕತ್ತರಿಸಬೇಕು. ಹಾಗೂ ಘಾಟಿಯಲ್ಲಿ ಮಳೆ ನೀರು ಹರಿದು ಹೋಗಲು ಮಾರ್ಗಗಳಿಲ್ಲ. ಇದು ಘಾಟ್‌ನ ಸುಗಮ ಸಂಚಾರಕ್ಕೆ ಮತ್ತೊಂದು ಅಡಚಣೆಯಾಗಿದೆ.

ಘಾಟಿ ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ತಮ್ಮ ವಾಹನಗಳಲ್ಲಿ ಎಸಿ ಹಾಕುತ್ತಾರೆ. ಇದರಿಂದಾಗಿ ಎದುರಿಗೆ ಬರುವ ವಾಹನದ ಹಾರ್ನ್ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಆಗುಂಬೆ ಘಾಟ್‌ನಲ್ಲಿ ವಾಹನ ಚಲಾಯಿಸುವಾಗ ಎಲ್ಲ ವಾಹನ ಸವಾರರು ಎಸಿ ಹಾಕದೆ ಕಿಟಕಿಗಳನ್ನು ತೆರೆದು ವಾಹನ ಚಲಾಯಿಸಿದರೆ ಉತ್ತಮ.