ಡೈಲಿ ವಾರ್ತೆ: 26 ಜನವರಿ 2023

‘ಮಂಡ್ಯ ಬಿಟ್ಟು ಹೋಗಿ’: ಬಿಜೆಪಿಗರಿಂದಲೇ ‘GO BACK ಆರ್.ಅಶೋಕ್’ ಅಭಿಯಾನ

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಲಾಗಿದ್ದು, ಸಚಿವರ ಬದಲಾವಣೆಗೆ ಇದೀಗ ಜಿಲ್ಲೆಯ ಬಿಜೆಪಿ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದೆ.

ಸಚಿವ ಗೋಪಾಲಯ್ಯ ಅವರನ್ನ ಬದಲಿಸಿ ಆರ್.ಅಶೋಕ್ ಅವರಿಗೆ ಮಂಡ್ಯ ಉಸ್ತುವಾರಿಯನ್ನು ನೀಡಲಾಗಿದೆ. ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಅಲ್ಲದೇ, ಜಿಲ್ಲೆಯವರೇ ಆದ ನಾರಾಯಣ ಗೌಡ ಅವರನ್ನ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಕೆಲವು ಬಿಜೆಪಿ ಮುಖಡರು ಒತ್ತಾಯಿಸಿದ್ದಾರೆ.

ಮಂಡ್ಯದ ವಿವಿ ರಸ್ತೆ, ಸುಭಾಷ್ ರಸ್ತೆ ಗೋಡೆ ಮೇಲೆ ಹಾಗೂ ಜಿಲ್ಲೆಯ ಮದ್ದೂರು ಸೇರಿದಂತೆ ಹಲವಡೆ ‘ಗೋ ಬ್ಯಾಕ್ ಆರ್ .ಅಶೋಕ್’ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ‘GO BACK, ‘ಮಂಡ್ಯ ಬಿಟ್ಟು ಹೋಗಿ’ ಎಂದು ಬರೆದಿರುವ ಪೋಸ್ಟರ್ ಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆಗಳಿವೆ.