ಡೈಲಿ ವಾರ್ತೆ:15 ಫೆಬ್ರವರಿ 2023

ಚಿತ್ತೂರು: ಬೈಕ್ ಡಿಕ್ಕಿ ಹೊಡೆದು ಕಡವೆ ಮರಿ ಸಾವು, ಸವಾರನಿಗೆ ಗಾಯ!

ಕುಂದಾಪುರ: ಚಲಿಸುತ್ತಿದ್ದ ಬೈಕಿಗೆ ಕಡವೆ ಮರಿಯೊಂದು ಅಡ್ಡ ಬಂದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದ್ದು, ಬೈಕ್ ಜಖಂಗೊಡಿದ್ದಲ್ಲದೇ ಸವಾರನಿಗೂ ಗಾಯಗಳಾಗಿವೆ.

ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರೊಬ್ಬರು ಚಿತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಸಂದರ್ಭ ಹಾರ್ಮಣ್ಣು ಎಂಬಲ್ಲಿರುವ ಪೆಟ್ರೋಲ್ ಬಂಕ್ ಸಮೀಪ ಬರುತ್ತಿದ್ದಂತೆ ಕಡವೆಮರಿಯೊಂದು ವೇಗವಾಗಿ ರಸ್ತೆಗೆ ಹಾರಿದ ಪರಿಣಾಮ ಸ್ಕೂಟರ್ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಡವೆ ಮರಿಯ ತಲೆಗೆ ಪೆಟ್ಟುಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಬೈಕ್ ಸವಾರನಿಗೂ ಗಾಯಗಳಾಗಿವೆ. ಸ್ಕೂಟರ್ ಮುಂಭಾಗ ಜಖಂಗೊಂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.