ಡೈಲಿ ವಾರ್ತೆ:23 ಫೆಬ್ರವರಿ 2023

ದಕ್ಷಿಣ ಕನ್ನಡ: ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ವರ್ಗಾವಣೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಎನ್. ಶಶಿಕುಮಾರ್ ಅವರನ್ನು ರೈಲ್ವೆ ಡಿಐಜಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ.

ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರ ಹುದ್ದೆಗೆ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ನೇಮಕ ಮಾಡಲಾಗಿದೆ. ಕುಲದೀಪ್ ಸದ್ಯ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿದ್ದಾರೆ.

ಶಶಿಕುಮಾರ್ ಸೇರಿದಂತೆ 7 ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಬೆಂಗಳೂರು ವೈರ್’ಲೆಸ್ ಎಸ್.ಪಿಯಾಗಿದ್ದ ಡಿ.ಕಿಶೋರ್ ಬಾಬು ಅವರನ್ನು ಗುಪ್ತದಳ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಗೊಳಿಸಲಾಗಿದೆ. ಕೆಎಸ್ ಆರ್’ಪಿ ಬೆಂಗಳೂರು ಕಮಾಂಡೆಂಟ್ ಆಗಿರುವ ಕೆ.ವಂಶಿಕೃಷ್ಣ ಅವರನ್ನು ಬೆಂಗಳೂರು ವೈರ್’ಲೆಸ್ ಎಸ್.ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಮುಹಮ್ಮದ್ ಸುಜೀತಾ ಎಂ.ಎಸ್. ಅವರನ್ನು ಬೆಂಗಳೂರು ಸಿಎಆರ್ ಡಿಸಿಪಿಯಿಂದ ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅರುಣಾಂಶುಗಿರಿ ಅವರನ್ನು ಸಿಎಆರ್ ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಲೋಕಾಯುಕ್ತ ಎಸ್.ಪಿ. ಯಶೋಧಾ ವಂಟಗೋಡಿ ಅವರನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.