ಡೈಲಿ ವಾರ್ತೆ:01 ಮಾರ್ಚ್ 2023

ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ನಾನು ಬಂಟ್ವಾಳದಲ್ಲಿ ರಾಜಕೀಯಕ್ಕೆ ಬಂದಿಲ್ಲ.
ಕೊನೆಯ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ, ರಮಾನಾಥ ರೈ

ಬಂಟ್ವಾಳ: ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ದಿಂದ ನಾನು ಬಂಟ್ವಾಳದಲ್ಲಿ ರಾಜಕೀಯಕ್ಕೆ ಬಂದಿಲ್ಲ. ವಿದ್ಯಾರ್ಥಿ ಜೀವನದಿಂದಲೇ ಜನಸೇವೆ ಹಾಗೂ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದು, ಆ ಬಳಿಕ ಜನ ಆಶೀರ್ವಾದ ಮಾಡಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಕ್ಷೇತ್ರದ ಜನರ ಮೇಲೆ ಜನ್ಮಜನ್ಮಾಂತರಕ್ಕೂ ಮುಗಿಯದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಸಾಧ್ಯವಾಗ ದಿದ್ದರೂ ನನ್ನ ಅವಧಿಯಲ್ಲಿ ವೈಯುಕ್ತಿಕ ಹಿತಾಸಕ್ತಿ ಬದಿಗಿರಿಸಿ ಶಕ್ತಿ ಮೀರಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ನಾನು ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ಮತ್ತೆ ಕ್ಷೇತ್ರದ ಜನ ಆಶೀರ್ವಾದ ಮಾಡಿದರೆ ವಿಶೇಷ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.

ಬುಧವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಐದು ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸ್ವತಃ ಕ್ಷೇತ್ರಕ್ಕೆ ಬಂದು ಈ ಎಲ್ಲಾ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಮಾಡಿದ್ದಾರೆ.

ಸರಕಾರದಲ್ಲಿ ಉಸ್ತುವಾರಿ ಮಂತ್ರಿಯಾಗಿ ಸ್ವಕ್ಷೇತ್ರದ ಜೊತೆಗೆ ಇಡೀ ಜಿಲ್ಲೆಯನ್ನು ಅಭಿವೃದ್ದಿ ವಿಚಾರದಲ್ಲಿ ಸಮಾನವಾಗಿ ಕಂಡಿದ್ದೇನೆ. ಎಲ್ಲೂ ತಾರತಮ್ಯ ನೀತಿ ಅನುಸರಿಸಿಲ್ಲ. ಅನುದಾನವಾಗಲೀ, ಅಭಿವೃದ್ದಿ ಕಾಮಗಾರಿಯಾಗಲೀ ಎಲ್ಲೂ ತಾರತಮ್ಯ ಮಾಡದೆ ಮನಪೂರ್ವಕವಾಗಿ ನಡೆಸಿದ್ದೇನೆ.
ಬಿ.ಸಿ. ರೋಡಿನಿಂದ ಪೂಂಜಾಲಕಟ್ಟೆ ವರೆಗೆ ಹೆದ್ದಾರಿ ಅಗಲೀಕರಣ ಕಾಮಗಾರಿ ಅನುದಾನ ನಾನೇ ಒದಗಿಸಿದ್ದೇನೆ. ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದ್ದು ಎಂದು ಹೇಳುವ ಜಾಯಮಾನವೇ ನನ್ನದಲ್ಲ ನಾನು ಯಾವತ್ತೂ ಸುಳ್ಳು ಹೇಳಲಾರೆ. ಹೇಳಿದ್ದನ್ನು ಮಾಡುತ್ತೇನೆ. ಮಾಡಿದ್ದನ್ನು ಮಾತ್ರ ಹೇಳುತ್ತೇನೆ. ಮುಂದೆಯೂ ಈ ಮಾತಿಗೆ ನಾನು ಬದ್ದನಾಗಿದ್ದೇನೆ. ಎಂದರು.

ಪಶ್ಚಿಮ ವಾಹಿನಿ ಯೋಜನೆ ಪ್ರಕಾರ ನದಿಗೆ ಡ್ಯಾಂ ಹಾಗೂ ಸೇತುವೆ ಕಟ್ಟಲು ಕಾರಣ ರಮಾನಾಥ ರೈ ಆಗಿದ್ದು, ಸ್ವತಃ ನಾನೇ ಸಿಎಂ ಸಿದ್ದರಾಮಯ್ಯ ಅವರಲ್ಲಿಗೆ ನಿಯೋಗ ಕೊಂಡೊಯ್ದು ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿಗೆ ಪ್ರಯತ್ನಿಸಿದ್ದೇನೆ, ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಸಭಾ ಭವನ, ಶಾಲಾ-ಕಾಲೇಜುಗಳಿಗೆ ಕೊಠಡಿಗಳು, ರಸ್ತೆಗಳು, ತಾಲೂಕಿನಲ್ಲಿ 100 ಬೆಡ್ ಆಸ್ಪತ್ರೆಗೆ ಕಟ್ಟಡ ನಿರ್ಮಾಣ, ಒನ್ ಟೈಮ್ ಇಂಪ್ರೂವ್ ಮೆಂಟ್ ನನ್ನ ಕಾಲದಲ್ಲಿ ಮಂಜೂರುಗೊಂಡಿದೆ ಎಂದರು.

ಇದ್ದ ರಸ್ತೆಗೆ ಕೇವಲ ಡಾಮರು ಹಾಕಿದ್ದಲ್ಲ, ಹಲವಾರು ರಸ್ತೆಯನ್ನೇ ನಿರ್ಮಿಸುವ ಕಾರ್ಯ ನಾನು ಮಾಡಿದ್ದೇನೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ರಸ್ತೆ ಕಾಂಕ್ರಿಟಿಕರಣ ನನ್ನ ಕಾಲದಲ್ಲಿ ಆಗಿರುತ್ತದೆ. ಅರುವತ್ತು ಕೋಟಿಯ ಒಳಚರಂಡಿ ಕಾಮಗಾರಿ, ಪಂಜೆ ಮಂಗೇಶರಾಯರ ಭವನ, ಅಂಬೇಡ್ಕರ್ ಭವನ, ಕಡೇಶ್ವಾಲ್ಯ-ಅಜಿಲಮೊಗರು ಸೌಹಾರ್ದ ಸೇತುವೆ, ಬೆಂಜನಪದವು ಕ್ರೀಡಾಂಗಣ ಎಲ್ಲವೂ ನನ್ನ ಕಾಲದಲ್ಲಿ ಮಂಜೂರಾತಿಯಾಗಿದ್ದು, ಆದರೆ ಇದೀಗ ಅದೆಲ್ಲವೂ ನೆನೆಗುದಿಗೆ ಬಿದ್ದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪಾಣೆಮಂಗಳೂರು ಪೇಟೆಗೆ ಸಂಪರ್ಕಿ ಕಲ್ಪಿಸುವ ಕಿರು ಸೇತುವೆ ಹಾಗೂ ಗೂಡಿನಬಳಿಯಿಂದ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುವ ಕಂಚಿಕಾರ ಕಿರು ಸೇತುವೆಯನ್ನೂ ಹೊಸದಾಗಿ ನಿರ್ಮಿಸಿದ್ದೇನೆ. ಕಾರಿಂಜೇಶ್ವರ, ಪೊಳಲಿ ಹಾಗೂ ಶ್ರೀ ನಿಟಿಲಾಪುರ ದೇವಸ್ಥಾನದ ಸುತ್ತಮುತ್ತ ರಸ್ತೆಗಳು ಹಾಗೂ ದೇವಸ್ಥಾನದ ಅಭಿವೃದ್ದಿ ಮಾಡಿದ್ದೇನೆ. ದೇವಸ್ಥಾನಗಳಿಗೆ ಬೇಕಾದ ಎಲ್ಲಾ ಮರಗಳನ್ನು ಒದಗಿಸಿದ್ದೇನೆ. ದೇವಸ್ಥಾನ, ಚರ್ಚ್, ಮಸೀದಿ ಎನ್ನದೆ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನೂ ಏಕಪ್ರಕಾರವಾಗಿ ಕಂಡು ಅಭಿವೃದ್ದಿಗೆ ಶ್ರಮಿಸಿದ್ದೇನೆ. ಎಲ್ಲ ಒತ್ತಡ ವಿರೋಧಗಳನ್ನು ಮೆಟ್ಟಿ ನಿಂತು ಜಿಲ್ಲಾಧಿಕಾರಿ ಕಚೇರಿ ಪಡೀಲಿನಲ್ಲಿ ನಿರ್ಮಿಸಲು ಯೋಜನೆ ಪೂರ್ಣಗೊಂಡಿದೆ. ಆದರೆ ನಮ್ಮ ಸರಕಾರದ ನಂತರ ಅದೂ ಕೂಡಾ ನೆನೆಗುದಿಗೆ ಬಿದ್ದಿದೆ ಎಂದರು.

ರಾಜ್ಯದಲ್ಲಿ ಅತ್ಯಂತ ಹೆಚ್ಚು ಹೊಸ ಪಂಚಾಯತ್ ಸ್ಥಾಪನೆಯಾದದ್ದು ಬಂಟ್ವಾಳದಲ್ಲಿ. ಅದು ನನ್ನ ಅವಧಿಯಲ್ಲಿ. ರಾಜ್ಯದಲ್ಲೇ ಹೆಚ್ಚು ಅಂಗನವಾಡಿ ನಿರ್ಮಾಣ ವಾಗಿರುವುದೂ ಬಂಟ್ವಾಳದಲ್ಲಿ, ಅತೀ ಹೆಚ್ಚು ಅಂದರೆ ಸುಮಾರು ಐದು ಸಾವಿರ ಕೋಟಿ ಕಾಮಗಾರಿ ನಡೆದದ್ದು ಬಂಟ್ವಾಳದಲ್ಲಿ, ಸಿದ್ದರಾಮ್ಯ ಸರಕಾರದ ಅವಧಿಯಲ್ಲಿ ಲೆಕಕ್ಕಿಂತ ಹೆಚ್ಚು ಮನೆಗಳನ್ನು ಪ್ರತಿ ಪಂಚಾಯತಿನಲ್ಲೂ ಕೊಡಲಾಗಿದೆ. ಬಡವರ ಸೇವೆ ಮಾಡುವ ಸಂದರ್ಭ ಯಾವತ್ತೂ ರಾಜಕೀಯ, ತಾರತಮ್ಯ ಮಾಡಿಲ್ಲ. ಅನ್ಯಾಯವೆಸಗಿಲ್ಲ. ಆದರೆ ಇದೀಗ ಕೇವಲ ಆದೇಶ ಪತ್ರ ಮಾತ್ರ ನೀಡಲಾಗುತ್ತಿದೆ, ಮನೆ ನೀಡುತ್ತಿಲ್ಲ ಎಂದರು.

ರಸ್ತೆ ನಿರ್ಮಾಣ ಮಾತ್ರ ಅಭಿವೃದ್ದಿ ಅಲ್ಲ ಎಂದು ಹೇಳುತ್ತಿದ್ದವರು ಇಂದು ತುಂಡು ರಸ್ತೆಗಳಿಗೆ ಡಾಂಬರು ಹಾಕಿ ಅಭಿವೃದ್ದಿ ಎಂದು ಹೇಳಿ ಗ್ರಾಮದ ಮೂಲೆ-ಮೂಲೆಗಳಲ್ಲಿ ಬ್ಯಾನರ್-ಕಟೌಟ್ ಅಳವಡಿಸುವ ದುಸ್ಥಿತಿ ಬಂದೊದಗಿದೆ ಎಂದು ರಮಾನಾಥ ರೈ ಲೇವಡಿ ಮಾಡಿದರು.

ಅನಂತಾಡಿ ಪಂಚಾಯತಿನಲ್ಲಿ ಕಾಂಗ್ರೆಸ್ ಇದುವರೆಗೆ ಗೆದ್ದಿಲ್ಲ. ಆದರೆ ಇದೀಗ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಸಂಖ್ಯಾತರೇ ಮತ ನೀಡಿ ಗೆಲ್ಲಿಸಿದ್ದಾರೆ. ಇಲ್ಲಿನ ಗೆಲುವು ನನ್ನ ಪಾಲಿಗೆ ಅತ್ಯಂತ ಹೆಚ್ಚು ಸಂತೋಷ ತಂದಿದೆ ಎಂದರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಇದೆ. ಜೊತೆಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಈಗೇನಾದರೂ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಬಿಜೆಪಿಗರ ಬೊಬ್ಬೆ ಆಕಾಶಕ್ಕೇರುತ್ತಿತ್ತು ಎಂದ ರಮಾನಾಥ ರೈ ಬಿಜೆಪಿ ವೈಫಲ್ಯದ ವಿರುದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತೀ ಗ್ರಾಮ ಪಂಚಾಯತಿಯ ಮೂಲೆ ಮೂಲೆಗೂ ಸಂಚರಿಸುವಂತೆ ರಥ ಯಾತ್ರೆ ನಡೆಯಲಿದ್ದು, ಮಾರ್ಚ್ 10 ರಿಂದ ಪೊಳಲಿಯಿಂದ ಆರಂಭವಾಗಿ 14 ದಿನಗಳ ಕಾಲ ಈ ರಥ ಯಾತ್ರೆ ನಡೆಯಲಿದೆ. ಜೊತೆಗೆ ಪ್ರಜಾಧ್ವನಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ನೀಡಿದ ಭರವಸೆ ಇದುವರೆಗೂ ಸುಳ್ಳಾಗಿಲ್ಲ. ಕಾಂಗ್ರೆಸ್ ಹೇಳಿದ್ದೆಲ್ಲವನ್ನೂ ಮಾಡಿಕೊಟ್ಟಿದೆ. ಮುಂದೆಯೂ ಈ ಬಗ್ಗೆ ಸಂಶಯಪಡುವ ಅಗತ್ಯವಿಲ್ಲ ಎಂದ ರಮಾನಾಥ ರೈ ಒಂದು ಲಕ್ಷ ಕೋಟಿ ರೈತರ ಸಾಲ ಮನ್ನಾ ಕಾಂಗ್ರೆಸ್ ಮಾಡಿದರೆ ಅದನ್ನು ದೇಶಕ್ಕೆ ನಷ್ಟ ಎಂದು ಮೂದಲಿಸುವ ಸಂಸದರು ಬಿಜೆಪಿಯಲ್ಲಿದ್ದಾರೆ. ಆದರೆ ಬಿಜೆಪಿ ಸರಕಾರ ಬಡವರನ್ನು ಕಡೆಗಣಿಸಿ ಹತ್ತು ಲಕ್ಷ ಕೋಟಿ ರೂಪಾಯಿ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದರೆ ಆ ಬಗ್ಗೆ ಚಕಾರವೆತ್ತುವ ಯೋಗ್ಯತೆ ಯಾವ ಬಿಜೆಪಿಗರಿಗೂ ಇಲ್ಲ ಎಂದು ಕಿಡಿ ಕಾರಿದರು.

ನಾನು ಅಧಿಕಾರದಲ್ಲಿರುವಾಗ ಜನರ ಸೇವೆ ಮಾಡುವಾಗ, ಅಭಿವೃದ್ದಿ ಕಾಮಗಾರಿ ಕೈಗೊಳ್ಳುವಾಗ ಪಕ್ಷ, ಜಾತಿ, ವರ್ಗ, ಪಂಗಡ ಯಾವುದನ್ನೂ ನೋಡಿಲ್ಲ. ಎಲ್ಲರನ್ನೂ ಒಂದೇ ರೀತಿ ಕಂಡು ಜನರ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆಯೇ ಹೊರತು ಸ್ವಜನಪಕ್ಷಪಾತ, ಭ್ರಷ್ಟಾಚಾರ ಯಾವುದನ್ನೂ ನಡೆಸಿಲ್ಲ. ಸುಳ್ಳು ಆರೋಪ-ಆಪಾದನೆಗಳು ಅದೆಲ್ಲವೂ ಕ್ಷಣಿಕ. ಅದು ಇದೀಗ ಜನರಿಗೆ ಎಲ್ಲವೂ ಮನವರಿಕೆ ಯಾಗಿದೆ. ಇದೀಗ ಬಂಟ್ವಾಳದಲ್ಲಿ ಮರಳು ಮಾಫಿಯಾ, ಭ್ರಷ್ಠಾಚಾರವೂ ಮೇರೆ ಮೀರಿದೆ. ಎಂದರು.

ಬಾಡಿಗೆ ಕೋಣೆಯಲ್ಲಿದ್ದ ಬಂಟ್ವಾಳ ದ ಪದವಿ ಕಾಲೇಜಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪಾಲಿಟೆಕ್ನಿಕ್ ಕಾಲೇಜಿಗೂ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಪದವಿಪೂರ್ವ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲಾಗಿದೆ.
ಕೊರೊನಾ ಸಂದರ್ಭ 35 ಸಾವಿರ ಕಿಟ್ ವಿತರಿಸಲಾಗಿದೆ. ಅದೂ ಕೂಡಾ ಪಕ್ಷದ ಕಾರ್ಯಕರ್ತರ ಸ್ಪಂದನೆಯಿಂದ ಈ ಕಾರ್ಯ ಮಾಡಲಾಗಿದೆ. ಕೊರೋನಾ ಪೀಡಿತರಿಗೆ ಪಕ್ಷಾತೀತವಾಗಿ ನೆರವಾಗಿದ್ದೇನೆ ಎಂದು ರಮಾನಾಥ ರೈ ತಿಳಿಸಿದರು. ಪಕ್ಷ ನನಗೆ ಎಲ್ಲ ರೀತಿಯ ಜವಾಬ್ದಾರಿ, ಅಧಿಕಾರ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಷಕ್ಕೆ ಜೀವಮಾನವಿಡೀ ಕೆಲಸ ಮಾಡಿದರೂ ಋಣ ತೀರದು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಪಕ್ಷದ ನಾಯಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಬಿ ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲಿಯಾನ್, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸುರೇಶ್ ಪೂಜಾರಿ ಜೋರಾ, ಜಗದೀಶ್ ಕೊಯಿಲ ವೆಂಕಪ್ಪ ಪೂಜಾರಿ ಮೊದಲಾದವರು ಜೊತೆಗಿದ್ದರು.