ಡೈಲಿ ವಾರ್ತೆ:05 ಮಾರ್ಚ್ 2023

ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ: ಅಂಗಡಿ ಬಳಿ ಆಟವಾಡುತ್ತಿದ್ದ ಬಾಲಕ ದುರ್ಮರಣ!

ಬೆಂಗಳೂರು : ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವಾಗ ಸ್ಫೋಟವಾಗಿ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾಳದ ಗುಡ್ಡದಹಳ್ಳಿಯ ಸಿಲಿಂಡರ್ ಅಂಗಡಿಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ 13 ವರ್ಷದ ಮಹೇಶ್ ಸಾವನ್ನಪ್ಪಿದ್ದಾನೆ. ಯಾದಗಿರಿಯ ರಾಮಸಮುದ್ರ ಮೂಲದ ಮಲ್ಲಪ್ಪ ಹಾಗೂ ಸರಸ್ವತಿ ದಂಪತಿ ಪುತ್ರನಾಗಿರೋ ಮಹೇಶ್, ಚೋಳನಾಯನಕಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮೃತನ ಪೋಷಕರು ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು.

ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ಅಂಗಡಿಯೊಂದರಲ್ಲಿ ಲಿಯಾಕತ್ ಎಂಬಾತ ಸಿಲಿಂಡರ್ ರಿಫಿಲ್ಲಿಂಗ್ ಮಾಡುವಾಗ ಉಂಟಾದ ಅನಿಲ ಸೋರಿಕೆಯಿಂದ ಸ್ಫೋಟಗೊಂಡಿದೆ. ಅಂಗಡಿ ಬಳಿ ಆಟವಾಡುತ್ತಿದ್ದ ಮಹೇಶ್‌ಗೆ ಸ್ಫೋಟದ ರಭಸಕ್ಕೆ ಬಾಲಕನ ದೇಹ ಛಿದ್ರಗೊಂಡಿದೆ. ಕೂಡಲೇ ಸ್ಥಳೀಯರು ಹಾಗೂ ಪೋಷಕರು ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಲಿಯಾಕತ್ ಎಸ್ಕೆಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.