ಡೈಲಿ ವಾರ್ತೆ:08 ಮಾರ್ಚ್ 2023

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಮೃತದೇಹ ಹಾಸ್ಟೆಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ, ಸಂಶಯ ವ್ಯಕ್ತಪಡಿಸಿದ ಕುಟುಂಬ.!

ಚಿಕ್ಕಮಗಳೂರು;ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಕಾಲೇಜಿನ ಹಾಸ್ಟೆಲ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಪತ್ತೆಯಾಗಿದ್ದು, ಪೋಷಕರು ಇದೀಗ ಹಲವು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕಿಶೋರ್ ಮೃತದೇಹ ಹಾಸ್ಟೆಲ್‌ನ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಠಡಿಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬಹಿರಂಗವಾಗಿತ್ತು.

ಕಿಶೋರ್ ಎಸೆಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ್ದ. ಅವರ ತಂದೆ ಈಶ ಆಟೋ ಚಾಲಕರಾಗಿದ್ದು, ಬಡತನದ ಮಧ್ಯೆಯೂ ಮಗನಿಗೆ ಎಂಜಿನಿಯರಿಂಗ್ ಕಲಿಸಲು ಮುಂದಾಗಿದ್ದರು. ಇದೀಗ ಮಗನ ಸಾವಿನಿಂದ ಕುಟುಂಬ ಆಘಾತಕ್ಕೆ ಒಳಗಾಗಿದೆ.
ಇನ್ನು ಕಿಶೋರ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ, ಸಿಕ್ಕಸಿಕ್ಕವರ ಬಳಿ ಹಣ ಕೇಳುತ್ತಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಹಣ ಯಾಕೆ ಬೇಕು? ಕಾಲೇಜಿನಲ್ಲಿ ಬೇರೆ ಚಟುವಟಿಕೆಗಳು ನಡೆಯುತ್ತಿತ್ತಾ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಕ್ಯಾಂಪಸ್ ಒಳಗೆ ಡ್ರಗ್ಸ್ ದಂಧೆ, ಬಡ್ಡಿ ದಂಧೆ ಇರುವ ಬಗ್ಗೆ ಕುಟುಂಬ ಸಂಶಯ ವ್ಯಕ್ತಪಡಿಸಿದೆ. ಈ ಕುರಿತು ಅಸಲಿಯತ್ತು ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ.