ಡೈಲಿ ವಾರ್ತೆ:13 ಮಾರ್ಚ್ 2023

ದಕ್ಷಿಣಕನ್ನಡ: ಅಝಾನ್ ಬಗ್ಗೆ ಈಶ್ವರಪ್ಪ ಅವಹೇಳನಾಕಾರಿಯಾಗಿ ಹೇಳಿಕೆ – ವ್ಯಾಪಕ ಆಕ್ರೋಶ

ಮಂಗಳೂರು: ನಾನು ಎಲ್ಲಿಗೆ ಹೋದರು ಇದೊಂದು ತಲೆ ನೋವು ಎಂದು ಆಝಾನ್ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ಕಾವೂರಿನ ಶಾಂತಿನಗರದ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದ ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭಾಷಣ ಮಾಡುತ್ತಿದ್ದಾಗ, ಸ್ಥಳೀಯ ಮಸೀದಿಯಿಂದ ಆಝಾನ್ ಆರಂಭವಾಗಿದೆ.ಈ ವೇಳೆ ಸಿಡಿಮಿಡಿಯಾದ ಈಶ್ವರಪ್ಪ ನಾನು ಎಲ್ಲಿಗೆ ಹೋದರು ಇದೊಂದು ತಲೆ ನೋವು. ಮೈಕ್ ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕೇಳೋದಾ ಅವನಿಗೆ ಕಿವುಡಾ? ಎಂದು ವಿವಾದ ಸೃಷ್ಟಿಸಿದ್ದಾರೆ. ವೇದಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ನಿಮ್ಮೂರಿನ ಚರಂಡಿ, ರಸ್ತೆ, ಕಟ್ಟಡ ಕಟ್ಟಬೇಕೆಂದು ಸ್ವಾತಂತ್ರ್ಯ ತಂದ್ರಾ, ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು, ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ, ಇದರಲ್ಲೇನು ಅನುಮಾನ ಬೇಡ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.