ಡೈಲಿ ವಾರ್ತೆ:28 ಮಾರ್ಚ್ 2023

ಉಡುಪಿ: ಮೂಲಭೂತ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೀಡಿ ಕಾರ್ಮಿಕರ ಧರಣಿ

ಉಡುಪಿ: ಬೀಡಿ ಕಾರ್ಮಿಕರ ಮೂಲಭೂತ ಸಮಸ್ಯೆ ಬಗೆಹರಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಬಳಿಕ ಈ ಕುರಿತ ಮನವಿಯನ್ನು ಅಪಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಈ ವೇಳೆ ಜಿಲ್ಲೆಯ ಕಾರ್ಮಿಕ ಅಧಿಕಾರಿ ಕುಮಾರ್ ಹಾಜರಿದ್ದರು.

ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಸಮಾನ ಕನಿಷ್ಠ ಕೂಲಿ 1,000 ಬೀಡಿಗೆ 395 ರೂ., ತುಟ್ಟಿ ಭತ್ತೆ ಅಂಕ ಒಂದಕ್ಕೆ 5 ಪೈಸೆಯಂತೆ ನೀಡಬೇಕು. ಬೀಡಿ ಕಾರ್ಮಿಕರ ನೈಜ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿ, ಪರಿಹಾರ ಕಾಣಬೇಕು. ಪರ್ಯಾಯ ಉದ್ಯೋಗಕ್ಕೆ ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಾನೂನು ಬಾಹಿರ ಬೀಡಿ ಉತ್ಪಾದನೆಯನ್ನು ನಿಲ್ಲಿಸಿ, ಕಾರ್ಮಿಕ ಕಾನೂನುಗಳ ಕಠಿಣ ಜಾರಿಗೆ ಕ್ರಮ ವಹಿಸಬೇಕು. ಬೀಡಿ ಕಾರ್ಮಿಕರ ಆರೋಗ್ಯದ ಪ್ರಶ್ನೆಗಳಿಗೆ ಸರಕಾರ ಜವಾಬ್ದಾರಿ ವಹಿಸಬೇಕು. ಕರ್ನಾಟಕ ರಾಜ್ಯ ಸರಕಾರ ನ್ಯಾಯಾಲಯದಲ್ಲಿ ಬಾಕಿ ಇರುವ ಕನಿಷ್ಟ ಕೂಲಿ ಮೊಕದ್ದಮೆ ಕೂಡಲೇ ಇತ್ಯರ್ಥಗೊಳಿಸಬೇಕು. ಬೀಡಿ ಕಾರ್ಮಿಕರಿಗೆ ವಾರದಲ್ಲಿ 6 ದಿನದ ಕೆಲಸ ಸಿಗಬೇಕು. ಎಲೆ, ತಂಬಾಕು ಹೆಸರಿನಲ್ಲಿ ದಂಡ ವಸೂಲಿ ನಿಲ್ಲಬೇಕು. ಎಲ್ಲಾ ಬೀಡಿ ಕಾರ್ಮಿಕರಿಗೆ ಲಾಗ್ ಪುಸ್ತಕ ನೀಡಬೇಕು. ಬೀಡಿ ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ಒದಗಿಸಬೇಕು. 2015ರಲ್ಲಿ ಬಾಕಿ ಇರಿಸಿಕೊಂಡಿದ್ದ 12.75 ರೂ. ತುಟ್ಟಿಭತ್ತೆ ಮತ್ತು ಕನಿಷ್ಠ ಕೂಲಿಯನ್ನು ಕೂಡಲೇ ಕೊಡಿಸಬೇಕು. ಬೀಡಿ ಕಾರ್ಮಿಕರಿಗೆ ತಿಂಗಳಿಗೆ 6000 ರೂ. ಪಿಂಚಣಿ ನೀಡಬೇಕು. ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಬೇಕು. ಬೀಡಿ ಕಾರ್ಮಿಕರಿಗೆ ನಿವೇಶನಕ್ಕೆ ಅಂದರೆ ಜಾಗ ಇಲ್ಲದವರಿಗೆ ಜಾಗ ಕೊಟ್ಟು ಸಹಾಯಧನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಧರಣಿಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೆಯರಹೊಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್ ಎಸ್., ಮುಖಂಡರಾದ ಬಲ್ಕೀಸ್, ಸುನೀತಾ ಶೆಟ್ಟಿ, ನಳಿನಿ ಎಸ್., ಸಿಐಟಿಯು ಉಡುಪಿ ತಾಲೂಕು ಸಮಿತಿ ಸದಸ್ಯರಾದ ಮೋಹನ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಉಪಸ್ಥಿತರಿದ್ದರು.