ಡೈಲಿ ವಾರ್ತೆ:28 ಮಾರ್ಚ್ 2023

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು!

ಚಿತ್ರದುರ್ಗ : ಚಿತ್ರದುರ್ಗ ಹೊಳಲ್ಕೆರೆ ತಾಲೂಕಿನ ನಂದನ ಹೊಸೂರು ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ನಡೆದಿದೆ.

ಮೃತ ಯುವಕರು ಹೆಚ್.ಡಿ ಪುರದ ಸಂಜಯ್ (19), ನಂದನಹೊಸೂರು ಗೊಲ್ಲರಹಟ್ಟಿಯ ಗಿರೀಶ್ (19) ಹಾಗೂ ಕಣಿವೆ ಜೋಗಿಹಳ್ಳಿ ಮನು (19) ಎಂದು ತಿಳಿದುಬಂದಿದೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಗಿಸಿ ಈ ಮೂವರು ತಮ್ಮೂರಿಗೆ ವಾಪಸ್ಸಾಗಿದ್ದರು. ಈ ವೇಳೆ ಮೂವರು ಸೇರಿಕೊಂಡು ಕೆರೆಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕೆರೆಯ ಆಳ ತಿಳಿಯದೇ ಮುಂದಕ್ಕೆ ಈಜಲು ಹೋಗಿದ್ದಾರೆ. ಆದರೆ ಆ ವೇಳೆ ತೀರಾ ಬಳಲಿದ್ದಾರೆ. ಕಾರಣ ದಡ ಸೇರಲು ಸಾಧ್ಯವಾಗದೇ ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೂವರು ಯುವಕರ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆಯಲಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.