ಡೈಲಿ ವಾರ್ತೆ:10 ಏಪ್ರಿಲ್ 2023

ಬಂಟ್ವಾಳ:ಕಾಂಗ್ರೆಸ್ ಪರಿಶಿಷ್ಟ ಜಾತಿ-ಪಂಗಡಗಳ ಆಶ್ರಯದಲ್ಲಿ ಐಕ್ಯತಾ ಸಮಾವೇಶ – ಜನರು ಮತದ ಮೌಲ್ಯ ಅರಿತುಕೊಂಡು ಅರ್ಹರನ್ನು ಚುನಾಯಿಸಿ : ರಾಜ್ಯಸಭಾ ಸದಸ್ಯ ಹನುಮಂತಯ್ಯ ಕರೆ

ಬಂಟ್ವಾಳ : ಮಾ.09, ಭಾರತ ಸಂವಿಧಾನದಲ್ಲಿ ಕೋಟ್ಯಾಧೀಶನ ಮತಕ್ಕೂ ಕಡು ಬಡವನ ಮತಕ್ಕೂ ಸಮಾನ ಮೌಲ್ಯವಿದ್ದು, ಮತದಾರರು ತಮ್ಮ ಮತದ ಮೌಲ್ಯ ಅರಿತುಕೊಂಡು ಮತದಾನ ಮಾಡಿ ಅರ್ಹರನ್ನು ತಮ್ಮ ಪರವಾಗಿ ಕೆಲಸ ಮಾಡುವವರನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಕರೆ ನೀಡಿದರು.


ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕಗಳ ನೇತೃತ್ವದಲ್ಲಿ ಭಾನುವಾರ ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸತ್ಯ-ಸುಳ್ಳುಗಳನ್ನು ಸ್ವತಃ ವಿಮರ್ಶೆ ಮಾಡಿಕೊಂಡು ಜನ ಮತ ಚಲಾಯಿಸಬೇಕು. ಸುಳ್ಳು ಹೇಳಿ ಜನರನ್ನು ಮರುಳು ಮಾಡುವ ಕಾಲ ಕಳೆದು ಹೋಗಿದೆ. ಅದೇ ಕಾಲಘಟ್ಟಕ್ಕೆ ಮತದಾರ ಮತ್ತೆ ಮರಳುವಂತಾಗಬಾರದು. ಜನ ತಮ್ಮ ಮತಗಳನ್ನು ಯಾವುದೇ ರೀತಿಯ ಆಮಿಷಕ್ಕೊಳಗಾಗದೆ ಸ್ವಯಂ ವಿವೇಚನೆ ಮಾಡಿಕೊಂಡು ಅತ್ಯಂತ ಮೌಲ್ಯಯುತ ಪರಮಾಧಿಕಾರವನ್ನು ಚಲಾಯಿಸಬೇಕು ಎಂದರು.



ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಜನಪರವಾಗಿ ನಡೆದುಕೊಂಡು ಬಂದ ಇತಿಹಾಸ ಇರುವ ಪಕ್ಷವಾಗಿದ್ದು, ಎಲ್ಲಾ ಜಾತಿ-ಜನಾಂಗದ ಪರವಾಗಿ ಕಾನೂನು-ಕಾಯ್ದೆಗಳನ್ನು ಉಂಟು ಮಾಡಿ ಸರ್ವರ ಏಳಿಗೆ ಬಯಸಿದ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಕಾಂಗ್ರೆಸ್ ಜನರಿಗಾಗಿ ಮಾಡಿದ್ದನ್ನು ಇಲ್ಲವಾಗಿಸಿದ್ದು, ಮಾರಾಟ ಮಾಡಿದ್ದು ಎಂಬ ಕುಖ್ಯಾತಿ ಬಿಜೆಪಿ ಪಾಲಿಗಿದೆ ಬಿಟ್ಟರೆ ಜನರಿಗಾಗಿ ಮಾಡಿದ್ದು ಏನೂ ಇಲ್ಲ ಎಂದ ಹನುಮಂತಯ್ಯ, ಕಾಂಗ್ರೆಸ್ ಉಳ್ಳವರ ಸೊತ್ತಾಗಿದ್ದ ಹಣಕಾಸು ಸಂಸ್ಥೆಯಾದ ಬ್ಯಾಂಕನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡವರನ್ನು ಕೂಡಾ ಬ್ಯಾಂಕ್ ಗ್ರಾಹಕರನ್ನಾಗಿ ಮಾಡಿದೆ. ಗೇಣಿದಾರರಿಗೆ ಭೂಮಿ ಹಂಚುವ ಮೂಲಕ ಭೂಮಾಲಕರನ್ನಾಗಿ ಮಾಡಿದ ಖ್ಯಾತಿಯೂ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಬಡವರನ್ನು ಬ್ಯಾಂಕ್ ಬಾಗಿಲಿಗೆ ಬರುವಂತೆ ಮಾಡಿದಂತೆ ಬಡವರಿಗೆ ಸಾಲ ಪಡೆಯುವ ಹಕ್ಕು ನೀಡಿದ್ದೂ ಕಾಂಗ್ರೆಸ್, ಬಡವರ ಸಾಲ ಮನ್ನಾ, ಬಡ್ಡಿ ಮನ್ನಾ ಮಾಡಿ ಬಡವರ ಕಣ್ಣೀರೊರೆಸಿದ್ದು ಕೂಡಾ ಕಾಂಗ್ರೆಸ್ ಪಕ್ಷವಾಗಿದೆ. ಇದೆಲ್ಲವನ್ನು ಇಂದಿನ ತಲೆಮಾರಿಗೆ ತಿಳಿಸಿಕೊಡುವ ಕಾರ್ಯಕ್ರಮ ಆಗಬೇಕು. ಬಿಜೆಪಿಗರ ಬಣ್ಣದ ಮಾತುಗಳಿಗೆ ಬಲಿಯಾಗಿ ಜನ ತಮ್ಮ ಬದುಕನ್ನೇ ಕಳೆದುಕೊಳ್ಳದಂತೆ ಎಚ್ಚರ ವಹಿಸಿ ಎಂದು ಕರೆ ನೀಡಿದರು.



ಮಾಜಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡದ ಜನರ ಎಲ್ಲಾ ಬೇಡಿಕೆಗಳಿಗೂ ಡಾ. ಅಂಬೇಡ್ಕರ್ ಅವರ ಆಶಯದಂತೆ ಸ್ಪಂದಿಸುತ್ತಾ ಬಂದಿರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಂಟ್ವಾಳ ಕ್ಷೇತ್ರದಲ್ಲೂ ಪರಿಶಿಷ್ಟರ ಬಹುಪಾಲು ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ, ಮುಂದೆಯೂ ಸಮುದಾಯದ ಬೇಡಿಕೆಗಳಿಗೆ ವಿಶೇಷ ಮನ್ನಣೆ ನೀಡುವುದಾಗಿ ತಿಳಿಸಿದರು.



ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ ಸಮಾವೇಶ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್ ಧರ್ಮಸೇನ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಪಾಲಯ್ಯ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಶೇಖರ ಕುಕ್ಕೇಡಿ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ನಾರಾಯಣ ನಾಯ್ಕ,
ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ. ಎಸ್. ಮುಹಮ್ಮದ್, ಪದ್ಮಶೇಖರ ಜೈನ್, ಡಾ ರಘು, ಸೋಮನಾಥ, ಕು ಅಪ್ಪಿ, ಶ್ರೀಮತಿ ಸರೋಜಿನಿ, ಅಣ್ಣು, ಚೆನ್ನಪ್ಪ ನಾಯ್ಕ, ಪ್ರೀತಂರಾಜ್ ದ್ರಾವಿಡ್, ನಾಗರಾಜ್ ಲಾಯಿಲ, ಚಂದ್ರಹಾಸ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.



ರಾಜಾ ಚೆಂಡ್ತಿಮಾರ್, ಧೂಮಪ್ಪ ಪರವ ಕೆದ್ದಳಿಕೆ, ಮೋಹನ ಬಡಕಬೈಲು, ಪರಮೇಶ್ವರ ಸಾಲ್ಯಾನ್ ನಡುಮನೆ, ವಸಂತಿ ಚಂದಪ್ಪ, ಉಮೇಶ್ ಸಪಲ್ಯ, ವೆಂಕಪ್ಪ ಎಂಡಿ, ಜಯಕುಮಾರ್, ಅಮ್ಮು ಅರ್ಬಿಗುಡ್ಡೆ, ಮಹಾಲಿಂಗ ನಾಯ್ಕ, ದಿವಾಕರ ಚೆಂಡ್ತಿಮಾರ್, ಜಯ ಸಂಪೋಳಿ, ಮೋಹನ ಚೆಂಡ್ತಿಮಾರ್, ರಾಘವೇಂದ್ರ, ಕಾಳಯ್ಯ, ಜನಾರ್ದನ, ಸೋಮನಾಥ ನಾಯಕ್, ಹೊನ್ನಪ್ಪ ಕುಂದರ್, ಬೇಬಿ ಮೈರಾನ್ ಪಾದೆ, ಸೋಮನಾಥ ಚೆಂಡ್ತಿಮಾರ್, ವಿನಯ, ಅನಂದ ಕೆದ್ದಳಿಕೆ, ವಿಜಯ ಏಮಾಜೆ, ಪ್ರೇಮ ನೆಟ್ಲಮುಡ್ನೂರು, ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಸೀತಾರಾಮ ಪೂಜಾರಿ ನಾವೂರು ಹಾಗೂ ನಿತಿನ್ ಕುಲಾಲ್ ಅಲ್ಲಿಪಾದೆ ಅವರು ರಮಾನಾಥ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಂಟ್ವಾಳ ಬ್ಲಾಕ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಚಂದ್ರಹಾಸ ನಾಯಕ್ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಚೆಂಡ್ತಿಮಾರ್ ಪ್ರಸ್ತಾವನೆಗೈದರು. ಸತೀಶ್ ಅರಳಿ ಭೀಮ ಗೀತೆ ಹಾಡಿದರು. ಚಂದ್ರಪ್ಪ ಮಾಸ್ಟರ್ ಮದ್ದಡ್ಕ, ಸುರೇಶ್ ಪಿ ಬಿ ಹಾಗೂ ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮೊದಲು ಬಿ ಸಿ ರೋಡು ರಕ್ತೇಶ್ವರಿ ದೇವಸ್ಥಾನ ಬಳಿಯಿಂದ ಸ್ಪರ್ಶ ಕಲಾ ಮಂದಿರ ತನಕ ಮೆರವಣಿಗೆ ಸಾಗಿ ಬಂತು.