ಡೈಲಿ ವಾರ್ತೆ:28 ಏಪ್ರಿಲ್ 2023

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

ಶಿವಮೊಗ್ಗ: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭದ್ರಾವತಿ ಮೂಲದ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.

ವಿಚಾರಣಾಧೀನ ಕೈದಿ ಸೆಲ್‌ನಲ್ಲಿದ್ದ ಭದ್ರಾವತಿಯ ಕರುಣಾಕರ ದೇವಾಡಿಗ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ.

ಶುಕ್ರವಾರ ಮುಂಜಾನೆ 7 ಗಂಟೆ ಸಮಯದಲ್ಲಿ ಕೈದಿಗಳಿಗೆ ತಿಂಡಿ ಕೊಡುವ ವೇಳೆಯಲ್ಲಿ ಸೆಲ್‌ನ ಕಿಟಕಿಗೆ ಮೈ ಉಜ್ಜುವ ನಾರನ್ನೇ ಹಗ್ಗವನ್ನಾಗಿ ಮಾಡಿಕೊಂಡು ನೇಣು ಬಿಗಿದುಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಕೊಲೆ ಪ್ರಕರಣ ಒಂದರಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಕರುಣಾಕರ ಜೈಲು ಸೇರಿದ್ದರಿಂದ ಮಾನಸಿಕವಾಗಿ ಖಿನ್ನನಾಗಿದ್ದನು. ಆತನಿಗೆ ವೈದ್ಯರು ಸಹ ಕೌನ್ಸೆಲಿಂಗ್ ಮಾಡಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ತುಂಗಾ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.