ಡೈಲಿ ವಾರ್ತೆ: 06 ಮೇ 2023

ಮಹಿಳೆಯರಿಗೆ ಸುರಕ್ಷಿತ, ಸುಭದ್ರ, ಸಮೃದ್ಧಿದಾಯಕ ಪ್ರಣಾಳಿಕೆ ಘೋಷಿಸಿದ ಕಾಂಗ್ರೆಸ್ : ಜಯಂತಿ ಪೂಜಾರಿ

ಬಂಟ್ವಾಳ : ಮಹಿಳೆಯರಿಗೆ ಸುರಕ್ಷಿತ, ಸುಭದ್ರ ಮತ್ತು ಸಮೃದ್ಧಿದಾಯಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಘೋಷಿಸಿದೆ. ಇಂತಹ ದೂರದೃಷ್ಟಿಯುಳ್ಳ ಕಾಂಗ್ರೆಸ್ ಗೆ ಭರ್ಜರಿ ಬಹುಮತ ನೀಡುವ ಮೂಲಕ ರಾಜ್ಯದಲ್ಲಿ ಸುಸ್ಥಿರ ಸರಕಾರ ರಚಿಸಲು ನೆರವಾಗುವಂತೆ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮನವಿ ಮಾಡಿದ್ದಾರೆ.

ಬಂಟ್ವಾಳ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಐದು ಪ್ರಮುಖ ಗ್ಯಾರಂಟಿ ಗಳು ಬೆಲೆ ಏರಿಕೆ ಗಗನಕ್ಕೇರಿರುವ ಇಂತಹ ಸಂದರ್ಭದಲ್ಲಿ ಮನೆ ನಿರ್ವಹಿಸಲು ಮಹಿಳೆಯರಿಗೆ ಅನುಕೂಲವಾಗು ವಂತಹ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂಬುದಾಗಿ ನಮ್ಮ ನಾಯಕರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಮನೆ ಯಜಮಾನಿಗೆ ತಿಂಗಳಿಗೆ ರೂ. 2,000, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ, ಪ್ರತಿ ಸದಸ್ಯನಿಗೆ ತಲಾ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇವು ಕಾಂಗ್ರೆಸ್ ಗ್ಯಾರಂಟಿಗಳಾಗಿವೆ. ಇನ್ನುಳಿದಂತೆ, ವಿಧವಾ ಪಿಂಚಣಿ 2,500ಕ್ಕೆ ಹೆಚ್ಚಳ, ದುಡಿಯುವ ಮಹಿಳೆಯರಿಗೆ 100 ಹಾಸ್ಟೆಲ್ ಗಳ ನಿರ್ಮಾಣ, ಕೈಗಾರಿಕಾ ಪಾರ್ಕ್‍ಗಳಲ್ಲಿ ಶೇ.20ರಷ್ಟು ನಿವೇಶನ ಮಹಿಳಾ ಉದ್ಯಮಿಗಳಿಗೆ ಮೀಸಲು, 5 ಸಾವಿರ ಸ್ತ್ರೀಶಕ್ತಿ ಕಿರು ಉದ್ಯಮಕ್ಕೆ ಸಹಕಾರ, ಹೈಸ್ಕೂಲ್, ಪಿಯುಸಿಗಳಲ್ಲಿ ವಿಧ್ಯಾಭ್ಯಾಸ ಕೈಬಿಟ್ಟ ಮಹಿಳೆಯರಿಗೆ ಆರ್ ಟಿಒಗಳಲ್ಲಿ ಉಚಿತ ವಾಹನ ಚಾಲನೆ ತರಬೇತಿ ಹಾಗೂ ಅವರಿಗೆ ಸಬ್ಸಿಡಿಯಲ್ಲಿ ಆಟೊರಿಕ್ಷಾ, ಕಾರು ನೀಡುವುದು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೂ ಹಲವಾರು ವಿಶೇಷ ಸೌಲಭ್ಯಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಎಲ್ಲಾ ಭರವಸೆಗಳು ಈಡೇರಬೇಕಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ, ನಮ್ಮ ಕ್ಷೇತ್ರದ ಅಭ್ಯರ್ಥಿ ಬಿ.ರಮಾನಾಥ ರೈಯವರೂ ಗೆಲ್ಲಬೇಕು. ರೈಯವರು ಅತ್ಯಂತ ಪಾರದರ್ಶಕ, ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದವರು. ಬಂಟ್ವಾಳದ ಸಮಗ್ರ ಅಭಿವೃದ್ಧಿ ರೈಯವರಿಂದ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇನ್ನಷ್ಟು ಅಭಿವೃದ್ಧಿ ಹೊಂದಲು, ಕ್ಷೇತ್ರದ ಜನತೆಯ ಜೀವನ ಗುಣಮಟ್ಟ ಸುಧಾರಿಸಲು ಚುನಾವಣೆಯಲ್ಲಿ ಮತ್ತೊಮ್ಮೆ ಅವರನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೋರಸ್, ಪುರಸಭಾ ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪುರಸಭಾ ಮಾಜಿ ಸದಸ್ಯರುಗಳಾದ ಧನವಂತಿ, ವಲರಿ, ಸಂಘಟನಾ ಕಾರ್ಯದರ್ಶಿ ಫೌಝಿಯಾ, ಡಿಸಿಸಿ ಸದಸ್ಯೆ ಫ್ಲೋಸಿ ಡಿಸೋಜ, ಪಾಣೆಮಂಗಳೂರು ಬ್ಲಾಕ್ ಸದಸ್ಯೆ ಶೋಭಾ ಶೆಟ್ಟಿ, ಬಂಟ್ವಾಳ ಬ್ಲಾಕ್ ಸದಸ್ಯೆ ಶಭಾನ ಮತ್ತಿತರರು ಉಪಸ್ಥಿತರಿದ್ದರು.